ಇತ್ತೀಚಿನ ಸುದ್ದಿshikshanaರಾಜ್ಯ

ಗ್ರಾಮೀಣ ಭಾಗದ ಮಕ್ಕಳಿಗೂ ಡಿಜಿಟಲ್ ಶಿಕ್ಷಣ : ಜಿಲ್ಲಾಧಿಕಾರಿ ಶಿಲ್ಪಾ ನಾಗ್…

ಚಾಮರಾಜನಗರ ತಾಲ್ಲೂಕಿನ ವೆಂಕಟಯ್ಯನ ಛತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಇನ್ಫೋಸಿಸ್ ಹಾಗೂ ಪಂಚಶೀಲ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ 50 ಸರ್ಕಾರಿ ಶಾಲೆಗಳಿಗೆ ಸಿಎಸ್‍ಆರ್ ನೆರವಿನಡಿ ಉಚಿತವಾಗಿ ಇನ್ಪೋಸಿಸ್, ಪಂಚಶೀಲ ರೋಟರಿ ಸಂಸ್ಥೆಗಳು ಕೊಡುಗೆಯಾಗಿ ನೀಡಿರುವ 5.75 ಕೋಟಿ ವೆಚ್ಚದ ಸ್ಟ್ಯಾಂಡ್ ಸಮೇತ ಸ್ಮಾರ್ಟ್ ಟಿ.ವಿ ಹಾಗೂ ಟ್ಯಾಬ್ ಪರಿಕರಗಳನ್ನು ಜಿಲ್ಲಾಧಿಕಾರಿಯವರು ವಿತರಿಸಿ ಮಾತನಾಡಿದರು.

ಪ್ರತಿಯೊಬ್ಬರು ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅತೀ ಮುಖ್ಯವಾಗಿದೆ. ಜಿಲ್ಲೆಯ ಮಕ್ಕಳು ಬುದ್ದಿವಂತರಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪರಿಣಾಮಕಾರಿಯಾಗಿ ಕಲಿಕಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲದೆ ಕಲಿಕಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ಡಿಜಿಟಲ್ ಶಿಕ್ಷಣಕ್ಕೆ ಮಕ್ಕಳನ್ನು ಪ್ರೇರೇಪಿಸುವ ಕೆಲಸ ಆಗಬೇಕಿದೆ. ಸ್ಮಾರ್ಟ್ ಟಿ.ವಿ ಹಾಗೂ ಟ್ಯಾಬ್ ವಿತರಣೆಗಾಗಿ ಜಿಲ್ಲೆಯ 50 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಲೆಗಳನ್ನು ಡಿಜಿಟಲ್ ಶಿಕ್ಷಣಕ್ಕೆ ಪರಿಗಣಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಮಕ್ಕಳಿಗೆ ಈಗ ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ. ಮಕ್ಕಳ ಬಗ್ಗೆ ಶಿಕ್ಷಕರಿಗೆ ಪೂರ್ಣ ಅರಿವಿದೆ. ಜಿಲ್ಲೆಯಲ್ಲಿ ಸ್ಪ್ರೀಂಗ್ ಬೋರ್ಡ್ ಕಾರ್ಯಕ್ರಮ ಕೂಡ ಯಶಸ್ವಿಯಾಗಿದೆ. ಹೀಗಾಗಿ ಸ್ವಾರ್ಟ್ ಟಿ.ವಿ ಹಾಗೂ ಟ್ಯಾಬ್‍ಗಳ ಮೂಲಕ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ನೀಡಲು 100 ಮಂದಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯ 5 ತಾಲೂಕುಗಳಿಗೆ ತಲಾ 10 ಶಾಲೆಗಳಿಗೆ ಡಿಜಿಟಲ್ ಕಲಿಕಾ ಪರಿಕರಗಳನ್ನು ವಿತರಿಸಲಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಯ ವೇಗವನ್ನು ಚುರುಕುಗೊಳಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಅನುತ್ತೀರ್ಣಗೊಂಡ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಎಸ್.ಎಸ್.ಎಲ್.ಸಿ ಮರು ಪರೀಕ್ಷೆ ಬರೆಯಲು 3 ತಿಂಗಳ ಅವಕಾಶ ಕಲ್ಪಿಸಿ ಕಲಿಕಾ ತರಬೇತಿಯನ್ನು ಹರದನಹಳ್ಳಿಯ ಬುಡಕಟ್ಟು ಆಶ್ರಮ ಶಾಲೆಯಲ್ಲಿ ನೀಡಲಾಗುತ್ತಿತ್ತು. ಮಕ್ಕಳು ಪರೀಕ್ಷೆಗೆ ಸಿದ್ದವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳನ್ನು ಕಡಿಮೆ ಅವಧಿಯಲ್ಲಿ ತರಬೇತುಗೊಳಿಸಿದ ಶಿಕ್ಷಕರನ್ನು ಅಭಿನಂದಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಯಾವುದೇ ಹಂತದಲ್ಲಿ ಮಕ್ಕಳ ಒದು ನಿಲ್ಲಬಾರದು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಪಂಚಶೀಲ ರೋಟರಿ ಸಂಸ್ಥೆಯ ಕಿರಣ್ ರಾಬರ್ಟ್, ಸುಂದರ್, ಇನ್ಫೋಸಿಸ್ ಸಂಸ್ಥೆಯ ಸತೀಶ್, ಆನಂದ್ ಅವರು ಮಕ್ಕಳಿಗೆ ಡಿಜಿಟಲ್ ಶಿಕ್ಷಣದ ಅಗತ್ಯತೆ ಕುರಿತು ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಸಿದ್ದರಾಜು, ಇನ್ಫೋಸಿಸ್ ಸಂಸ್ಥೆಯ ಬಿಳಿಗಿರಿರಂಗ, ಪಂಚಶೀಲ ರೋಟರಿ ಸಂಸ್ಥೆಯ ರಾಜೇಂದ್ರ ಪ್ರಸಾದ್, ಆನಂದ್, ಮುಖ್ಯಶಿಕ್ಷಕರಾದ ನಾಗರತ್ನಮ್ಮ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button