ಕ್ರೀಡೆ
Trending

ಆರ್​ಸಿಬಿ ಗೆದ್ರೆ ಅತಿರೇಕದ ವರ್ತನೆ ಬೇಡ

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಇಂದು ಗುಜರಾತ್​ನ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)  ಹಾಗೂ ಪಂಜಾಬ್ ಕಿಂಗ್ಸ್ ಸೆಣಸಲಿವೆ. ಆರ್​ಸಿಬಿ ಗೆಲುವಿಗಾಗಿ ಕರ್ನಾಟಕದಾದ್ಯಂತ ಅಭಿಮಾನಿಗಳ ಹಾರೈಕೆ, ಪ್ರಾರ್ಥನೆ ಸಲ್ಲಿಕೆಯಾಗುತ್ತಿವೆ. ಇದೇ ಸಂದರ್ಭದಲ್ಲಿ, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಪೊಲೀಸರಿಗೆ (Bengaluru Police) ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಸಂಭ್ರಮಾಚರಣೆ ನೆಪದಲ್ಲಿ ಯಾರೂ ಅತಿರೇಕದ ವರ್ತನೆ ತೋರದಂತೆ, ಒಂದು ವೇಳೆ ತೋರಿದರೆ ಕ್ರಮ ಕೈಗೊಳ್ಳುವಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸ್ ಕಮಿಷನರ್ ದಯಾನಂದ್ ಸೂಚನೆ ನೀಡಿದ್ದಾರೆ. ಎಲ್ಲ ಡಿಸಿಪಿಗಳು ಹಾಗೂ ಎಸಿಪಿಗಳಿಗೆ ನಿರ್ದೇಶನ ನೀಡಲಾಗಿದೆ.ಆರ್​ಸಿಬಿ ಗೆದ್ದರೆ ಸಂಭ್ರಮಾಚರಣೆ ವೇಳೆ ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ.

ಅಭಿಮಾನದ ಹೆಸರಿನಲ್ಲಿ ಅತಿರೇಕದ ವರ್ತನೆ ತೋರುವಂತಿಲ್ಲ ಎಂದು ಅಭಿಮಾನಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರಸ್ತೆ ತಡೆಯುವುದು, ಟೈರ್​ಗೆ ಬೆಂಕಿ ಹಚ್ಚುವುದು, ವಾಹನ ತಡೆಯುವುದು ಸಾರ್ವಜನಿಕರಿಗೆ ತೊಂದರೆ, ಶಾಂತಿಭಂಗ ಉಂಟು ಮಾಡುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ನಿಗಾ ವಹಿಸಲು ಡಿಸಿಪಿ, ಎಸಿಪಿಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.ಆಯಾ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಲಾಗಿದೆ. ಎಂ.ಜಿ.ರಸ್ತೆ, ಕೋರಮಂಗಲ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ನಿಗಾ ಹೆಚ್ಚಿಸಲಾಗುತ್ತದೆ.

ಬೆಂಗಳೂರಿನಲ್ಲಿ ಸ್ಕ್ರೀನ್ ಅಳವಡಿಸಿರುವ ಕಡೆ ಪೊಲೀಸರ ಕಣ್ಗಾವಲು ಇರಲಿದೆ. ಪೊಲೀಸರ ಅನುಮತಿ ಪಡೆಯದೆ ಸ್ಕ್ರೀನ್​​ ಅಳವಡಿಕೆ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.ಪಬ್, ಕ್ಲಬ್, ರೆಸ್ಟೋರೆಂಟ್​​​ಗಳು ಅವಧಿ ಮೀರಿ ಕಾರ್ಯಾಚರಣೆ ಮಾಡುವಂತಿಲ್ಲ. ರೆಸ್ಟೋರೆಂಟ್​​​ಗಳನ್ನು ನಿಗದಿತ ಸಮಯಕ್ಕೆ ಬಂದ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಎಲ್ಲೆಡೆ ಹೊಯ್ಸಳ ಮತ್ತು ಬೀಟ್ ಪೊಲೀಸರು ಗಸ್ತು ಕಾರ್ಯಾಚರಣೆ ಹೆಚ್ಚಿಸಿ ನಿಗಾ ವಹಿಸಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button