Uncategorized
Trending

ಮೇ. 15ರಂದು ನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಅಣಕು ಪ್ರದರ್ಶನ

ಚಾಮರಾಜನಗರ, ಮೇ 12 ತುರ್ತು ಸಂದರ್ಭದಲ್ಲಿ ನಾಗರಿಕರನ್ನು ಹಾಗೂ ಪ್ರಮುಖ ಸ್ಥಳಗಳನ್ನು ರಕ್ಷಣೆ ಮಾಡುವ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನವನ್ನು (ಮಾಕ್ ಡ್ರಿಲ್) ಚಾಮರಾಜನಗರ ಪಟ್ಟಣದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮೇ 15ರಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಾಗರಿಕರ ರಕ್ಷಣಾ ಕಾರ್ಯ ಚಟುವಟಿಕೆಗಳ ಕುರಿತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಮಾಕ್ ಡ್ರಿಲ್ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತುರ್ತು ಸಂದರ್ಭ ಅವಘಡಗಳು ಸಂಭವಿಸಿದ ಸಮಯದಲ್ಲಿ ಜನರು ಗಾಬರಿ ಅಥವಾ ಆತಂಕಕ್ಕೆ ಒಳಗಾಗದಂತೆ ಆತ್ಮವಿಶ್ವಾಸ ತುಂಬಿ ಅರಿವು ಮೂಡಿಸುವ ಉದ್ದೇಶದಿಂದ ಅಣಕು ಪ್ರದರ್ಶನವನ್ನು ನಡೆಸಲಾಗುತ್ತದೆ. ಇದು ಅಣಕು ಕಾರ್ಯಾಚರಣೆ ಮಾತ್ರವಾಗಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದರು.

ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಅಣಕು ಕಾರ್ಯಚರಣೆ (ಮಾಕ್ ಡ್ರಿಲ್) ಪ್ರದರ್ಶನ ಕೈಗೊಂಡು ಜಾಗೃತಿ ಮೂಡಿಸಲಾಗುತ್ತದೆ. ಈ ಅಣಕು ಕಾರ್ಯಚರಣೆಗೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಹೋಂ ಗಾರ್ಡ್, ವೈದ್ಯಕೀಯ ತಂಡ, ಸಾರಿಗೆ ತಂಡ, ಕಂಟ್ರೋಲ್ ರೂಂ, ಇನ್ನಿತರ ತಂಡಗಳನ್ನು ರಚಿಸಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.ತುರ್ತು ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸುವ ವೇಳೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ, ಗಾಯಗೊಂಡವರಿಗೆ ಆಸ್ಪತ್ರೆಗೆ ದಾಖಲು ಮಾಡುವ ಬಗ್ಗೆ, ಪ್ರಥಮ ಚಿಕಿತ್ಸೆ, ಅಗ್ನಿಶಾಮಕ, ಪೊಲೀಸರು, ಇನ್ನಿತರ ಅಧಿಕಾರಿಗಳ ಕರ್ತವ್ಯ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಅಣಕು ಪ್ರದರ್ಶನದ ಮೂಲಕ ನಡೆಸಿ ಅರಿವು ಉಂಟು ಮಾಡಲಾಗುತ್ತದೆ ಎಂದು ಹೇಳಿದರು.

ಅಣಕು ಕಾರ್ಯಾಚರಣೆಗೆ ಪೂರಕವಾಗಿರುವ ಎಲ್ಲ ಸಿದ್ದತೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು. ಅಗತ್ಯವಿರುವ ವಾಹನಗಳು, ಸಲಕರಣೆಗಳು, ಕಂಟ್ರೋಲ್ ರೂಂ, ಸಿಬ್ಬಂದಿ ನಿಯೋಜನೆ, ಆಂಬುಲೆನ್ಸ್‍ಗಳ ಕಾರ್ಯಚರಣೆ ಸೇರಿದಂತೆ ಎಲ್ಲವನ್ನು ಪರಿಪೂರ್ಣವಾಗಿ ಸಿದ್ದ ಮಾಡಿಕೊಂಡಿರಬೇಕು. ಜನರ ರಕ್ಷಣೆಗೆ ಕೈಗೊಳ್ಳಲಾಗುವ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಕ್ ಡ್ರಿಲ್ ಮುಖಾಂತರ ತಿಳಿವಳಿಕೆ ನೀಡಬೇಕಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿ ಅಣಕು ಕಾರ್ಯಚರಣೆ ಬಗ್ಗೆ ಮಾಹಿತಿ ನೀಡಿ ಜನರನ್ನು ಜಾಗೃತಗೊಳಿಸಬೇಕು. ಅವಘಡದ ಸಂದರ್ಭದಲ್ಲಿ ಹೇಗೆ ಕಾರ್ಯಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಸಾರ್ವಜನಿಕರ ಪಾತ್ರ, ವಿವಿಧ ಇಲಾಖೆಗಳು ನಿರ್ವಹಿಸಬೇಕಿರುವ ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡಿ ಆತ್ಮಸ್ತೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ತಹಶೀಲ್ದಾರರಾದ ಗಿರಿಜಾ, ರಮೇಶ್ ಬಾಬು, ಬಸವರಾಜು, ಗುರುಪ್ರಸಾದ್, ಜಿಲ್ಲ ಅಗ್ನಿಶಾಮಕ ಅಧಿಕಾರಿ ಕೆ.ಪಿ. ಗುರುರಾಜ್, ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಟರಾದ ಎಸ್.ಜಿ. ಮಹಾಲಿಂಗಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button