ರಾಜ್ಯ
Trending

 ರಾಜ್ಯ ರಾಜಕಾರಣದಲ್ಲಿ ದೊಂಬಿ ಎಬ್ಬಿಸಿರುವ ದುಂಬಿಗಳು ಯಾರು? ನೆಟ್‌ವರ್ಕ್‌ ಎಲ್ಲಿದೆ?‌ ಹನಿಟ್ರ್ಯಾಪ್‌ ಇನ್ಸೈಡರ್ಸ್!

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಹನಿಟ್ರ್ಯಾಪ್‌ ಸದ್ದು ಮಾಡುತ್ತಿದೆ. ಹೈಪ್ರೊಫೈಲ್‌ ರಾಜಕಾರಣಿಗಳನ್ನು ಟಾರ್ಗೆಟ್‌ ಮಾಡಿ, ಅವರನ್ನು ಹನಿಟ್ರ್ಯಾಪ್‌ ಖೆಡ್ಡಾಗೆ ಬೀಳಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪಗಳು, ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಮೇಶ್‌ ಜಾರಕಿಹೊಳಿ ಅವರಿಂದ ಆರಂಭವಾದ ಈ ಹನಿಟ್ರ್ಯಾಪ್‌ ಪ್ರಹಸನ ಇದೀಗ ಸಚಿವ ಕೆಎನ್‌ ರಾಜಣ್ಣವರೆಗೂ ಬಂದು ನಿಂತಿದೆ. ಈ ಅವಧಿಯಲ್ಲಿ ಹತ್ತಾರು ರಾಜಕಾರಣಿಗಳ ವಿರುದ್ಧ ಈ ಹನಿಟ್ರ್ಯಾಪ್‌ ಆರೋಪಗಳು ಕೇಳಿಬಂದಿದ್ದು, ಇದುವರೆಗೂ ಯಾವ ಪ್ರಕರಣದಲ್ಲೂ ಅಂತಿಮ ಸತ್ಯ ಹೊರಬಿದ್ದಿಲ್ಲ.ಸದ್ಯ ಕರ್ನಾಟಕದಲಿ ಹನಿಟ್ರ್ಯಾಪ್‌ ಪ್ರಕರಣಗಳ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆಯಾದರೂ, ಈ ಸಂಭಾವ್ಯ ಹನಿಟ್ರ್ಯಾಪ್‌ ಬಲೆಗೆ ಬೀಳಿಸುತ್ತಿರುವ ಮಹಿಳೆಯರು ಯಾರು ಎಂಬುದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅಸ್ತಿತ್ವದಲ್ಲಿ ಇರಬಹುದಾದ ಈ ಹನಿಟ್ರ್ಯಾಪ್‌ ಸಂಘದಲ್ಲಿ ಕೇವಲ ಮಹಿಳೆಯರು ಮಾತ್ರ ಇದ್ದಾರೋ ಅಥವಾ ಪುರುಷರೂ ಸೇರಿದ್ದಾರೋ ಎಂಬುದೇ ಯಾರಿಗೂ ಗೊತ್ತಿಲ್ಲ.

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದು ಸಾಧ್ಯವೇ ಇಲ್ಲ ಎಂದರೂ ಸರಿಯೇ. ಕಾರಣ ಇದುವರೆಗೂ ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಾಗಲಿ, ಸಾರ್ವಜನಿಕ ಡೊಮೇನ್‌ನಲ್ಲಿ ಯಾವುದೇ ಸ್ಪಷ್ಟ ಚಿತ್ರಣ ದೊರೆತಿಲ್ಲ.ಹೈಪ್ರೊಫೈಲ್‌ ರಾಜಕಾರಣಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎನ್ನಲಾದ ಈ ಸಂಭಾವ್ಯ ಹನಿಟ್ರ್ಯಾಪ್‌ ಗುಂಪು ಎಲ್ಲಿದೆ? ಈ ಕಾರ್ಟೆಲ್ ಹೇಗೆ ಕೆಲಸ ಮಾಡುತ್ತಿದೆ? ಈ ನೆಟ್‌ವರ್ಕ್‌ನ್ನು ನಿರ್ವಹಿಸುತ್ತಿರುವವರು ಯಾರು? ಹುಂ, ಹುಂ ಇದ್ಯಾವುದಕ್ಕೂ ಯಾರ ಬಳಿಯೂ ಸದ್ಯದ ಮಟ್ಟಿಗೆ ಉತ್ತರವಿಲ್ಲ.ಮಾಜ ಸಚಿವರಾದ ರಮೇಶ್‌ ಜಾರಕಿಹೊಳಿ ಮತ್ತು ಹೆಚ್‌.ವೈ ಮೇಟಿ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆಯರ ಹೆಸರುಗಳು ಸಾರ್ವಜನಿಕ ಡೊಮೇನ್‌ನಲ್ಲಿ ಚರ್ಚೆಗೆ ಬಂದಿತ್ತಾದರೂ, ಅದನ್ನು ಹೊರತುಪಡಿಸಿ ಉಳಿದ್ಯಾವ ಪ್ರಕರಣಗಳಲ್ಲೂ ಅಸಲಿಗೆ ಈ ಹನಿಟ್ರ್ಯಾಪ್‌ ಮಾಡುತ್ತಿರುವವರು ಯಾರು ಎಂಬುದು ಅಸ್ಪಷ್ಟವಾಗಿಯೇ ಉಳಿದಿದೆ. ಅಷ್ಟೇ ಅಲ್ಲದೇ, ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಸಿಡಿ ಕೂಡ ದೂರದ ರಷ್ಯಾದಲ್ಲಿ ತಯಾರಿಸಲಾಗಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು.ಸದ್ಯ ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದನ್ನು ಇಂತದ್ದೇ ನಿರ್ದಿಷ್ಟ ರಾಜಕಾರಣಿಗಳು ನಿರ್ವಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತವಾದರೂ, ಸ್ಪಷ್ಟ ಪುರಾವೆ ಇಲ್ಲದೇ ಯಾರ ಮೇಲೂ ಬೊಟ್ಟು ಮಾಡುವುದು ಸಾಧ್ಯವಾಗದ ಮಾತು. ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಮತ್ತು ತಮ್ಮದೇ ಪಕ್ಷದ ನಾಯಕರು ತಮ್ಮನ್ನು ಬೆಂಬಲಿಸುವಂತೆ ಒತ್ತಡ ಹೇರಲು, ಕೆಲವು ನಿರ್ದಿಷ್ಟ ರಾಜಕಾರಣಿಗಳು ಈ ಹನಿಟ್ರ್ಯಾಪ್‌ ಖೆಡ್ಡಾ ತೋಡಿದ್ದಾರೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಆದರೆ ಅವರೂ ಕೂಡ ಈ ಹನಿಟ್ರ್ಯಾಪ್‌ ಕಾರ್ಟೆಲ್‌ನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಬಾಯಿ ಬಿಡುತ್ತಿಲ್ಲ. ಸುಮ್ಮನೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಕೆಲವರ ಮೇಲೆ ಅನುಮಾನಗಳು ಬರುವಂತೆ ಮಾತನಾಡುತ್ತಿದ್ದಾರೆ.ಅದೆನೆ ಇರಲಿ, ರಾಜ್ಯದಲ್ಲಿ ಒಂದು ವೇಳೆ ಇಂತಹ ಹನಿಟ್ರ್ಯಾಪ್‌ ಕಾರ್ಟೆಲ್‌ ಇದ್ದಿದ್ದೇ ನಿಜವಾದರೆ ಅದನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಮೊದಲು ಉತ್ತರ ಹುಡುಕಬೇಕು. ಅಲ್ಲದೇ ಈ ಹನಿಟ್ರ್ಯಾಪ್‌ ಗುಂಪಿನ ಅಸ್ತಿತ್ವ ನಿಜವೇ ಆದರೆ, ಅದರ ಮೇಲ್ವಿಚಾರಣೆಯನ್ನು ಖಂಡಿತವಾಗಿಯೂ ಯಾರೋ ಪ್ರಭಾವಿ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ನಡೆಸುತ್ತಿರಬೇಕು.ಅದೆಲ್ಲಕ್ಕೂ ಮಿಗಿಲಾಗಿ ಈ ಸಂಭವನೀಯ ಹನಿಟ್ರ್ಯಾಪ್‌ ಗುಂಪಿನಲ್ಲಿ ಯಾರೆಲ್ಲಾಇದ್ದಾರೆ? ಅವರು ಹೇಗೆ ಕೆಲಸ ಮಾಡುತ್ತಿದ್ದಾರೆ? ಹೈಪ್ರೊಫೈಲ್‌ ರಾಜಕಾರಣಿಗಳನ್ನು ಖೆಡ್ಡಾಗೆ ಬೀಳಿಸಿದ ಮೇಲೆ ಇವರು ಎಲ್ಲಿ ಮಾಯವಾಗುತ್ತಾರೆ? ಇದೆಲ್ಲದರ ಬಗ್ಗೆ ತಿಳಿಯುವ ಹಕ್ಕು ರಾಜ್ಯದ ಜನತೆಗೆ ಇದೆ ಎಂದು ಹೇಳಬಹುದು.


Related Articles

Leave a Reply

Your email address will not be published. Required fields are marked *

Back to top button