ಇತ್ತೀಚಿನ ಸುದ್ದಿಸುದ್ದಿ
Trending

Information

ಸರಕಾರದ ಇಲಾಖೆಗಳ ಮುಂದೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ನಿತ್ಯವೂ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಇಲ್ಲಿ ಉತ್ತರ ಸಿಗದೆ ಹೈರಾಣಾದ ಆರ್‌ಟಿಐ ಕಾರ್ಯಕರ್ತರು ನೇರವಾಗಿ ಆಯೋಗದ ಮೆಟ್ಟಿಲೇರಿದರೆ ಅಲ್ಲಿಯೂ ಉತ್ತರವಿಲ್ಲ. ಏಕೆಂದರೆ ಕಳೆದ ಕೆಲವು ತಿಂಗಳಿನಿಂದ ಮಾಹಿತಿ ಹಕ್ಕು ಆಯುಕ್ತರ ಹುದ್ದೆಗಳು ಖಾಲಿ ಬಿದ್ದಿದ್ದು, ಅವುಗ: ನೇಮಕಾತಿಗೆ ಸರಕಾರ ಆಸಕ್ತಿ ತೋರಿಸುತ್ತಿಲ್ಲ.

ಬೆಂಗಳೂರು: ರಾಜ್ಯದ ಸರಕಾರಿ ಇಲಾಖೆಗಳಿಂದ ತಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ, ಹಕ್ಕಿನ ವಂಚನೆಯಾಗುತ್ತಿದೆ ಎಂಬ ನೂರಾರು ಮೇಲ್ಮನವಿಗಳು ನಿತ್ಯವೂ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಮುಂದೆ ಸಲ್ಲಿಕೆಯಾಗುತ್ತಲೇ ಇದೆ. ಇದನ್ನು ಆಲಿಸಲು ಆಯೋಗದ ಕಚೇರಿಯಲ್ಲಿ ಆಯುಕ್ತರೇ ಇಲ್ಲ! ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ರೂಪಿಸಿದ ಮಹತ್ವದ ಕಾಯಿದೆಗಳಲ್ಲಿ ಮಾಹಿತಿ ಹಕ್ಕು ಕಾಯಿದೆ ಕೂಡ ಒಂದು. ಇನ್ನೊಂದು ವರ್ಷ ಸರಿದರೆ ಆ ಕಾಯಿದೆಗೆ ದ್ವಿ ದಶಕ ಸಂಭ್ರಮ. ಇಂಥಾ ಕಾಯಿದೆಯನ್ನು ಅದರ ಜಾರಿಯಲ್ಲಿ ಸಂಭ್ರಮಿಸಬೇಕಿದ್ದ ಕರ್ನಾಟಕ ಸರಕಾರ, ಈ ಬಗ್ಗೆ ಹೆಚ್ಚು ನಿಗಾ ವಹಿಸಿಲ್ಲ. ಕಳೆದ ಆರೇಳು ತಿಂಗಳಿಂದ ಬಾಕಿ ಇರುವ ಆಯಕ್ತರ ಹುದ್ದೆಗಳನ್ನು ಭರ್ತಿ ಮಾಡದ ಹಿನ್ನೆಲೆಯಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಪ್ರಕರಣ ವಿಚಾರಣೆಗೆ ಬಾಕಿ ಇರುವ ಸ್ಥಿತಿ ನಿರ್ಮಾಣವಾಗಿದ್ದು, ಮೇಲ್ಮನವಿದಾರರು ಮಾಹಿತಿಗಾಗಿ ವರ್ಷಾನುಗಟ್ಟಲೇ ಕಾಯುವ ಸ್ಥಿತಿ ತಲೆದೋರಿದೆ.

ಮುಖ್ಯ ಆಯುಕ್ತರು ಸೇರಿ ಖಾಲಿ ಇರುವ ಏಳು ಮಾಹಿತಿ ಆಯುಕ್ತರ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಆಸಕ್ತಿ ತೋರದ ಕಾರಣ ಆಯೋಗದಲ್ಲಿ ಮೇಲ್ಮನವಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಮಾಹಿತಿ ಆಯುಕ್ತರ ಮೇಲೆ ಅಧಿಕ ಒತ್ತಡವಿದ್ದು, ಅವರ ಸೇವಾವಧಿಯೂ ಇನ್ನು ಐದು ತಿಂಗಳು ಮಾತ್ರ ಇರುವ ಹಿನ್ನೆಲೆಯಲ್ಲಿ ಸರಕಾರ ಮಾಹಿತಿ ಆಯುಕ್ತರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕೆಂಬುದು ಆರ್‌ಟಿಐ ಕಾರ್ಯಕರ್ತರ ಆಗ್ರಹವಾಗಿದೆ.

ಸರಕಾರಕ್ಕೆ ತಲೆನೋವುಮಾಹಿತಿ ಹಕ್ಕು ಆಯೋಗದಲ್ಲಿ ಓರ್ವ ಮುಖ್ಯ ಆಯುಕ್ತರು ಹಾಗೂ 10 ಆಯುಕ್ತರ (ಬೆಳಗಾವಿ ಮತ್ತು ಕಲಬುರಗಿಗೆ ತಲಾ ಒಂದೊಂದು) ಹುದ್ದೆಗಳಿವೆ. ಮುಖ್ಯ ಆಯುಕ್ತರು ಹಾಗೂ ಆರು ಮಾಹಿತಿ ಆಯುಕ್ತರ ಹುದ್ದೆಗಳ ನೇಮಕಕ್ಕೆ ಅಗತ್ಯವಾದ ಪ್ರಾಥಮಿಕ ಪ್ರಕ್ರಿಯೆಯನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಪೂರ್ಣಗೊಳಿಸಿದೆ. ಏಳು ಹುದ್ದೆಗಳಿಗೆ ಸುಮಾರು 2500ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಡಿಪಿಎಆರ್‌, ಆ ಆಕಾಂಕ್ಷಿಗಳಲ್ಲಿ ಯಾರು ಅರ್ಹರು ಎಂಬ ಕಿರುಪಟ್ಟಿ (ಶಾರ್ಟ್‌ಲಿಸ್ಟ್‌) ಯನ್ನೂ ಸಿದ್ಧಪಡಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಈ ಹಿಂದೆ ಎರಡು ಬಾರಿ ಮಾಹಿತಿ ಆಯುಕ್ತರ ಆಯ್ಕೆ ಸಂಬಂಧ ಸಭೆಯೂ ನಡೆದಿತ್ತು. ಆದರೆ ನೇಮಕ ಸಂಬಂಧ ಯಾವುದೇ ಅಂತಿಮ ನಿರ್ಣಯವಾಗಿಲ್ಲವೆಂದು ಹೇಳಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ, ಆಯ್ಕೆ ಸಮಿತಿಯು ಸುಮಾರು ನಾಲ್ಕು ತಿಂಗಳ ಹಿಂದೆಯೇ ಸಭೆ ನಡೆಸಿ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಿದೆ. ಆದರೆ ಅಂತಿಮ ಪ್ರಕಟಣೆಯನ್ನು ಅನೇಕ ಕಾರಣಗಳಿಂದ ತಡೆ ಹಿಡಿಯಲಾಗಿದೆ. ಮಾಹಿತಿ ಹಕ್ಕು ಆಯುಕ್ತರ ನೇಮಕವು ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಕಾರ ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎಂಬ ಗೊಂದಲದಿಂದಾಗಿ ಆ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕುತ್ತಾ ಬರುತ್ತಿದೆ. ಏಕೆಂದರೆ ಅವರಲ್ಲಿ ಬಹುತೇಕ ಮಂದಿ, ನಿವೃತ್ತ ಐಪಿಎಸ್‌, ಐಎಎಸ್‌ ಅಧಿಕಾರಿಗಳಿದ್ದಾರೆ. ಜತೆಗೆ ನಿವೃತ್ತ ನ್ಯಾಯಾಧೀಶರು, ಸರಕಾರಿ ಅಧಿಕಾರಿಗಳು ಸೇರಿದಂತೆ ದೊಡ್ಡ ದಂಡೇ ಇದೆ.

ಕಾಯಿದೆಯ ಆಶಯವೇ ವಿಫಲ”ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಆಡಳಿತದಲ್ಲಿನಾಗರಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಈ ಜನಪರ ಕಾನೂನನ್ನು ರಕ್ಷಿಸುವ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಹಾಗಾಗಿ ಸರಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು” ಎಂದು ನೈಜ ಹೋರಾಟಗಾರರ ವೇದಿಕೆ, ಮಾಹಿತಿ ಹಕ್ಕು ಕಾರ್ಯಕರ್ತರ ರಾಜ್ಯ ಸಮಿತಿಯು ಸರಕಾರ ಮತ್ತು ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.

ಹೈಕೋರ್ಟ್‌ ನಿರ್ದೇಶನಕಳೆದ ವಾರವಷ್ಟೇ ಹೈಕೋರ್ಟ್‌, ”ಮಾಹಿತಿ ಹಕ್ಕು ಆಯೋಗ ದಂಡ ವಿಧಿಸಿದ್ದ ಪ್ರಕರಣದಲ್ಲಿಮಾಹಿತಿ ಹಕ್ಕು ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರಕಾರ ಆದಷ್ಟು ಬೇಗ ಭರ್ತಿ ಮಾಡಬೇಕು. ಆಯುಕ್ತರು ಹುದ್ದೆಗಳು ಖಾಲಿ ಇರುವುದರಿಂದ ಮೇಲ್ಮನವಿಗಳು ವಿಲೇವಾರಿಯಾಗುತ್ತಿಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಬೇಕು” ಎಂದು ನಿರ್ದೇಶನ ನೀಡಿತ್ತು. ಜತೆಗೆ ಸುಪ್ರೀಂಕೋರ್ಟ್‌ ಕೂಡ ರಾಜ್ಯ ಸರಕಾರಗಳು ಮಾಹಿತಿ ಆಯುಕ್ತರ ಹುದ್ದೆಗಳನ್ನು ಖಾಲಿ ಬಿಡುವಂತಿಲ್ಲ. ಕಾಲಕಾಲಕ್ಕೆ ಆ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಹಲವು ಬಾರಿ ನಿರ್ದೇಶನಗಳನ್ನು ನೀಡಿದೆ.

ಬೆಳಗಾವಿ ಪೀಠವೂ ಖಾಲಿಬೆಳಗಾವಿ ಮಾಹಿತಿ ಹಕ್ಕು ಆಯೋಗದ ಬೆಳಗಾವಿ ಪೀಠದಲ್ಲಿಆಯುಕ್ತರಾಗಿದ್ದ ಬಿ.ವಿ.ಗೀತಾ 2022ರ ಏಪ್ರಿಲ್‌ನಲ್ಲಿ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡ ನಂತರ ಆ ಹುದ್ದೆ ಖಾಲಿ ಇದೆ. ಈವರೆಗೂ ಸರಕಾರ ಆ ಆಯುಕ್ತರ ಹುದ್ದೆಯನ್ನು ಭರ್ತಿ ಮಾಡಿಲ್ಲ. ಬೆಳಗಾವಿ ಪೀಠದ ವ್ಯಾಪ್ತಿಯ ಜಿಲ್ಲೆಗಳಿಗೆ ಸೇರಿದ ಸುಮಾರು 15 ಸಾವಿರ ಮೇಲ್ಮನವಿಗಳು ವಿಚಾರಣೆಗೆ ಬಾಕಿ ಇವೆ. ಮೊನ್ನೆಯಷ್ಟೇ ಅಲ್ಲಿ ಚಳಿಗಾಲದ ಅಧಿವೇಶನ ನಡೆಸಿದ್ದ ಸರಕಾರಕ್ಕೆ ಅಲ್ಲಿನ ಕೆಐಸಿ ಆಯುಕ್ತರ ಹುದ್ದೆ ಖಾಲಿ ಇರುವ ವಿಷಯ ತಿಳಿದಿಲ್ಲವೇ ಎಂದು ಪ್ರಶ್ನಿಸುತ್ತಾರೆ ಆರ್‌ಟಿಐ ಕಾರ್ಯಕರ್ತರು.

Related Articles

Leave a Reply

Your email address will not be published. Required fields are marked *

Back to top button