ಇತ್ತೀಚಿನ ಸುದ್ದಿರಾಜ್ಯ
Trending

Law and order

ಪಿಟಿಸಿಎಲ್ ಕಾಯಿದೆ ಅಡಿ ಬೆಂಗಳೂರು ಉತ್ತರ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಮಂಜೂರಾಗಿದ್ದ 2 ಎಕರೆ ಜಮೀನನ್ನು ಮಾರಾಟ ಮಾಡಿದ್ದ ಪ್ರಕರಣದಲ್ಲಿ, ಭೂಮಿ ಮೇಲಿನ ಹಕ್ಕುಗಳ ಮರುಸ್ಥಾಪನೆಗೆ ಕೋರಿ 12 ವರ್ಷಗಳ ಬಳಿಕ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ-ಪಿಟಿಸಿಎಲ್‌) ಕಾಯಿದೆಯಡಿ ಮಂಜೂರಾಗಿದ್ದ ಜಮೀನನ್ನು ಮಾರಾಟ ಮಾಡಿದ 12 ವರ್ಷಗಳ ಬಳಿಕ ಆ ಆಸ್ತಿಯ ಮೇಲಿನ ಹಕ್ಕುಗಳ ಮರುಸ್ಥಾಪನೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ. ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಪರಿಶಿಷ್ಟ ಜಾತಿಗೆ ಸೇರಿದ ದಿವಂಗತ ಲಕ್ಷ್ಮಯ್ಯ ಎಂಬುವರ ಉತ್ತರಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

”ಅರ್ಜಿದಾರರ ಪೂರ್ವಜರು ಜಮೀನು ಮಾರಾಟ ಮಾಡಿ 12 ವರ್ಷ ಕಳೆದಿವೆ. ಇದೀಗ ಆ ಜಮೀನನ್ನು ಮತ್ತೊಬ್ಬರಿಗೆ ವರ್ಗಾವಣೆಯಾಗಿದ್ದು, ಇದನ್ನು ಅನೂರ್ಜಿತವೆಂದು ಹೇಳುವುದು ಅತ್ಯಂತ ಅಸಮಂಜಸ, ಅಸಮಾನತೆ ಮತ್ತು ಕಾನೂನಿಗೆ ವಿರುದ್ಧವಾಗಲಿದೆ” ಎಂದು ನ್ಯಾಯಪೀಠ ಹೇಳಿದೆ.ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಭೂಮಿಗಳ ಪರಾಭಾರೆ ನಿಷೇಧ) ಕಾಯಿದೆ 2023ಕ್ಕೆ ರಾಜ್ಯ ಸರಕಾರ ತಿದ್ದುಪಡಿ ಮಾಡಿದ್ದು, ಕಲಂ 5ಕ್ಕೆ ಸಿ ಮತ್ತು ಡಿ ಉಪ ಕಲಂಗಳನ್ನು ಸೇರಿಸಿದೆ. ಅದರಂತೆ ಸರಕಾರದಿಂದ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಮಂಜೂರಾದ ಜಮೀನನ್ನು ಮಾರಾಟದ ಬಳಿಕ ಹಿಂಪಡೆಯಲು ಯಾವುದೇ ಕಾಲಾವಧಿಯ ಮಿತಿ ಇರುವುದಿಲ್ಲ. ಆದರೆ, ಈ ನಿಯಮ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಿಗೆ ಅನ್ವಯಿಸಲಿದೆ ಎಂದು ನ್ಯಾಯಾಲಯ ಹೇಳಿದೆ.

ಆಲ್ಲದೆ, ಈ ತಿದ್ದುಪಡಿ ಕಾಯಿದೆಯ ಸಿಂಧುತ್ವವನ್ನು ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದು, ಆ ಅರ್ಜಿ ವಿಚಾರಣಾ ಹಂತದಲ್ಲಿದೆ. ಈ ಸಂದರ್ಭದಲ್ಲಿ ನಿರ್ಧಾರಕ್ಕೆ ಬರಲಾಗುವುದಿಲ್ಲಎಂದು ನ್ಯಾಯಪೀಠ ಹೇಳಿದೆ. ಜತೆಗೆ, ಗೌರಮ್ಮ ಅಲಿಯಾಸ್‌ ಗಂಗವ್ವ ವಿರುದ್ಧದ ಜಿಲ್ಲಾಧಿಕಾರಿಗಳ ಪ್ರಕರಣದಲ್ಲಿ ಹೈಕೋರ್ಟ್‌ನ ಮತ್ತೊಂದು ಪೀಠ (ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ವಿಜಯ್‌ಕುಮಾರ್‌ಎ.ಪಾಟೀಲ್‌) ಜಮೀನು ಮಾರಿದ ಹಲವು ವರ್ಷಗಳ ನಂತರ ಮತ್ತೆ ಜಮೀನಿನ ಮೇಲಿನ ಹಕ್ಕುಗಳು ಮರು ಸ್ಥಾಪಿಸುವಂತೆ ಆದೇಶಿಸುವುದು ಸಮರ್ಥನೀಯವಲ್ಲವೆಂದು ತಿಳಿಸಿದೆ. ಹೀಗಾಗಿ ಮೇಲ್ಮನವಿದಾರರು ಸಾಕಷ್ಟು ವಿಳಂಬವಾಗಿ ಆಸ್ತಿಯ ಹಕ್ಕುಗಳನ್ನು ಪುನರ್‌ಸ್ಥಾಪಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆಲಕ್ಷ್ಮಯ್ಯ ಎಂಬುವರಿಗೆ 1981ರಲ್ಲಿ ಸರಕಾರದಿಂದ ಬೆಂಗಳೂರು ಉತ್ತರ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ 2 ಎಕರೆ ಜಮೀನು ಮಂಜೂರಾಗಿತ್ತು. ಈ ಜಮೀನನ್ನು 1995ರಲ್ಲಿ ಮಾರಾಟ ಮಾಡಿದ್ದರು. ಬಳಿಕ 2008ರಲ್ಲಿ ಜಮೀನಿನ ಹಕ್ಕುಗಳ ಮರುಸ್ಥಾಪನೆ ಕೋರಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ್ದ ಉಪ ವಿಭಾಗಾಧಿಕಾರಿಗಳು ಜಮೀನಿನ ಹಕ್ಕುಗಳು ಲಕ್ಷ್ಮಯ್ಯ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದರು. ಅದನ್ನು ಪ್ರಶ್ನಿಸಿ ಜಮೀನು ಖರೀದಿದಾರರು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ್ದ ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳ ಆದೇಶ ರದ್ದುಪಡಿಸಿದ್ದರು. ಸಾಕಷ್ಟು ವಿಳಂಬವಾಗಿ ಆಸ್ತಿ ಹಕ್ಕು ಪುನರ್‌ ಸ್ಥಾಪಿಸಲು ಕೋರಿ ಸಲ್ಲಿಸಿರುವ ಅರ್ಜಿದಾರರ ಮನವಿಯನ್ನು ಪುರಸ್ಕರಿಸುವುದಕ್ಕೆ ಸಾಧ್ಯವಿಲ್ಲವೆಂದಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Articles

Leave a Reply

Your email address will not be published. Required fields are marked *

Back to top button