ಬೆಂಗಳೂರು: ಸಂಸಾರ ಅಂದ್ಮೇಲೆ ಜಗಳ ಇದ್ದೆ ಇರುತ್ತೆ. ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಿದ್ರೆ ಸುಂದರ ಸಂಸಾರ ಆಗುತ್ತೆ. ಆದ್ರೆ ಕೆಲವೊಮ್ಮೆ ಜಗಳಗಳ ವಿಕೋಪಕ್ಕೆ ತಿರುಗಿರುವ ಘಟನೆಗಳು ನಮ್ಮ ಸುತ್ತಮುತ್ತಲೇ ನಡೆಯುತ್ತಿರುತ್ತವೆ. ಅಂತಹವುದೇ ಒಂದು ಪ್ರಕರಣ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಪತಿ, ಪತ್ನಿ (Husband And Wife) ನಡುವೆ ಒಡವೆ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೋಪದಲ್ಲಿ ಪತ್ನಿಯ ಮೇಲಿನ ಹಲ್ಲೆ ನಡೆಸಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ದಯಾನಂದ ನಗರದಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದಿದ್ದಾನೆ. ಇಬ್ಬರ ನಡುವೆ ಹಣದ ವಿಚಾರಕ್ಕೆ (finance) ಜಗಳ ನಡೆದಿತ್ತು.
ನಾಜೀಯಾ ಪತಿ ಫಾರೂಕ್ ನಿಂದ ಕೊಲೆಯಾದ ಮಹಿಳೆ. ಫಾರೂಕ್ ಈ ತಿಂಗಳ ಮನೆ ಬಾಡಿಗೆ ಹಣ ನೀಡಲು 6,500 ರೂ. ಎತ್ತಿಟ್ಟಿದ್ದರು. ಇದೇ ಹಣದಿಂದ ನಾಜೀಯಾ ಡ್ಯೂಪ್ಲಿಕೇಟ್ ಆಭರಣಗಳನ್ನು ಖರೀದಿಸಿದ್ದರು. ಈ ಹಣದ ವಿಷಯವಾಗಿ ಫಾರೂಕ್ ಕೋಪಗೊಂಡಿದ್ದನು.
ಚಿಕಿತ್ಸೆ ಫಲಕಾರಿಯಾಗದೇ ಸಾವು
ಬೆಳಗ್ಗೆ ಬಾಡಿಗೆ ನೀಡಲು ಹಣ ಕೇಳಿದಾಗ ನಾಜೀಯಾ ಆಭರಣ ಖರೀದಿಸಿರುವ ವಿಚಾರ ತಿಳಿಸಿದ್ದಾರೆ. ಕೋಪಗೊಂಡ ಫಾರೂಕ್ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಬಳಿಕ ನಾಜೀಯಾ ಪ್ರಜ್ಞಾಹೀನಳಾಗಿ ಬಿದ್ದಿದ್ದಾರೆ. ಕೂಡಲೇ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಾಜೀಯಾ ಸಾವನ್ನಪ್ಪಿದ್ದಾರೆ.


