ಕೆಆರ್ಎಸ್ನಲ್ಲಿ ಸಮೃದ್ಧ 119 ಅಡಿ ನೀರು ಸಂಗ್ರಹ.

ಜಿಲ್ಲೆಯ ಜೀವನಾಡಿ ಕೆಆರ್ಎಸ್ ಜಲಾಶಯದಲ್ಲಿ 119 ಅಡಿ ನೀರು ಸಂಗ್ರಹವಾಗಿದೆ. ಇದರಿಂದ ಬೇಸಿಗೆ ಹಂಗಾಮಿನ ಬೆಳೆಗೆ ನೀರಿನ ಸಮಸ್ಯೆಯಿಲ್ಲ. ಬೆಳೆದು ನಿಂತಿರುವ ಕಬ್ಬು ಬೆಳೆಗಳ ರಕ್ಷಣೆಗಾಗಿ ಕಟ್ಟುನೀರು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಹರಿಸುತ್ತಿರುವ ಹಿನ್ನಲೆಯಲ್ಲಿ ರೈತರು ಕೂಡ ನಿರಾತಂಕವಾಗಿ ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಜಲಾಶಯ ಕೆಳಭಾಗದಲ್ಲಿರುವ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಹೋಬಳಿ ರೈತರು ಈಗಾಗಲೇ ಭತ್ತದ ನಾಟಿ ಕೆಲಸ ಆರಂಭಿಸಿದ್ದಾರೆ. ಕಸಬಾ, ಕೆ.ಶೆಟ್ಟಹಳ್ಳಿ, ಅರಕರೆ ಹೋಬಳಿಗಳ ನಾಲೆಯ ಕೊನೆಯ ಭಾಗದ ರೈತರು ಸೇರಿದಂತೆ ಪಾಂಡವಪುರ, ಮಂಡ್ಯ, ಮದ್ದೂರು, ಮಳವಳ್ಳಿ ತಾಲೂಕುಗಳ ರೈತರು ಬೇಸಿಗೆ ಹಂಗಾಮಿನ ಭತ್ತದ ಬೆಳೆಗಳ ನಾಟಿಗಾಗಿ ಜಮೀನು ಹದಗೊಳಿಸಿಕೊಳ್ಳುತ್ತಿದ್ದಾರೆ. ಹಲವೆಡೆ ಸಸಿಮಡಿಗಳಲ್ಲಿ(ಒಟ್ಲುಪಾತಿ) ಭತ್ತದ ಪೈರುಗಳು ಮೂಡಿವೆ.
124.80 ಅಡಿ ಸಾಮರ್ಥ್ಯದ ಕೆಆರ್ಎಸ್ ಜಲಾಶಯದಲ್ಲಿ ಪ್ರಸ್ತುತ 119.60 ಅಡಿ ನೀರು ಲಭ್ಯವಿದ್ದು, ಜ.10 ರಿಂದ ಏ.28 ರವರೆಗೆ ಆನ್ ಆ್ಯಂಡ್ ಆಫ್ ಪದ್ಧತಿಯಲ್ಲಿ ನಾಲ್ಕು ಕಟ್ಟುಗಳಲ್ಲಿ ತಲಾ 18 ದಿನಗಳ ಕಾಲ ನೀರು ಹರಿಸುವುದಾಗಿ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ರೈತರಿಗೆ ತಿಳಿಸಿದ್ದಾರೆ. ಇದು ರೈತರಿಗೆ ವರದಾನವಾಗಿದ್ದು, ಬೆಳೆದು ನಿಂತಿರುವ ಕಬ್ಬು ಬೆಳೆ ರಕ್ಷಣೆ ಜತೆಗೆ ಭತ್ತದ ಫಸಲು ಬೆಳೆಯಲು ರೈತರು ಮುಂದಾಗಿದ್ದಾರೆ.
ಈ ಹಿಂದೆ ಬರಗಾಲ ಹಾಗೂ ನಾಲೆಗಳ ಆಧುನೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಕೆಆರ್ಎಸ್ ಜಲಾಶಯದ ನಾಲೆಗಳಿಗೆ ನೀರು ಹರಿಸಿರಲಿಲ್ಲ. ಬೇಸಿಗೆ ಹಂಗಾಮಿನಲ್ಲಿ ನೀರು ಹರಿಸದ ಕಾರಣ ಹಳ್ಳ, ಕೊಳ್ಳಗಳು ಬತ್ತಿ ಹೋಗಿದ್ದವು. ಜಲಮೂಲಗಳು ಬತ್ತಿ ಹೋದ ಹಿನ್ನಲೆಯಲ್ಲಿ ಬೆಳೆದು ನಿಂತಿದ್ದ ಕಬ್ಬು ಬೆಳೆ, ತೋಟಗಾರಿಕೆ ಬೆಳೆಯಾದ ತೆಂಗು ಇತರ ಬೆಳೆಗಳು ಒಣಗಿ ರೈತರು ನಷ್ಟ ಅನುಭವಿಸಿದ್ದರು.
ಜಿಲ್ಲೆಯಲ್ಲಿ ಪ್ರಸ್ತುತ 1 ಲಕ್ಷ ಎಕರೆಯಲ್ಲಿ ತನಿ ಹಾಗೂ ಕೂಳೆ ಕಬ್ಬು ಇದೆ. ಸುಸ್ಥಿರ ಬೇಸಾಯ ಮಾಡಿದರೆ ಮಣ್ಣಿನ ಫಲವತ್ತತೆ ಉಳಿಯುತ್ತದೆ. ಇಲ್ಲದಿದ್ದರೆ ಹೆಚ್ಚು ಕಬ್ಬು ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ಬೇಸಿಗೆ ಹಂಗಾಮಿನಲ್ಲಿ ಸುಮಾರು 20 ಸಾವಿರ ಎಕರೆಯಲ್ಲಿ ಭತ್ತ ನಾಟಿಯಾಗುವ ಸಾಧ್ಯತೆಯಿದೆ.ಬೇಸಿಗೆಯಲ್ಲಿ ಕಬ್ಬಿನ ಬೆಳೆ ರಕ್ಷಣೆಗಾಗಿ ಕೆಆರ್ಎಸ್ ಜಲಾಶಯದ ಎಲ್ಲ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುತ್ತಿದೆ. ರೈತರು ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು. ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು.
ಬೇಸಿಗೆ ಹಂಗಾಮಿನ ಬೆಳೆಗಳಿಗೆ ಕೊಡಬಹುದಾದಷ್ಟು ನೀರು ಕೆಆರ್ಎಸ್ ಜಲಾಶಯದಲ್ಲಿ ಸಂಗ್ರಹವಾಗಿದೆ. ಭತ್ತದ ಬೆಳೆಯ ಅವಧಿ ಕನಿಷ್ಠ 100 ದಿನವಾಗಿದೆ. ಹೀಗಾಗಿ ಮೇನಲ್ಲೂ ಒಂದು ಕಟ್ಟು ನೀರು ಹರಿಸುವ ಮೂಲಕ ಭತ್ತ ಬೆಳೆಯನ್ನು ರಕ್ಷಣೆ ಮಾಡಿ ರೈತರಿಗೆ ನೆರವಾಗಬೇಕು.ನಮ್ಮ ಜಮೀನುಗಳು ಜಲಾಶಯದ ಕೆಳಭಾಗದಲ್ಲಿಯೇ ಇರುವುದರಿಂದ ಈಗಾಗಲೇ ನಾವು ಭತ್ತ ನಾಟಿ ಮಾಡಿದ್ದೇವೆ. ಕಟ್ಟು ಪದ್ಧತಿಯಲ್ಲಿ ನೀರು ಹರಿಸುವುದರಿಂದ ಗದ್ದೆಗೆ ನೀರು ನಿಲ್ಲಿಸುತ್ತೇವೆ. ಇದರಿಂದ ಭತ್ತದ ಇಳುವರಿಯೂ ಹೆಚ್ಚುತ್ತದೆ. ಈ ಭಾರಿ ಬೇಸಿಗೆ ಭತ್ತ ಬೆಳೆ ನಮ್ಮ ಕೈ ಸೇರುವ ಭರವಸೆಯಿದೆ.