ಬಿಟ್ ಕಾಯಿನ್ ಹಗರಣದ ಅಂಕಿ-ಅಂಶಗಳನ್ನು ನೋಡಿದರೆ ನಾನೇ ಮೂರ್ಛೆ ಬೀಳುತ್ತೇನೆ: ಡಿಕೆಶಿ
“ಬಿಟ್ ಕಾಯಿನ್ ಹಗರಣದ ಪ್ರಮಾಣ ಲೆಕ್ಕ ಹಾಕಲು ನನಗೆ ಸಾಧ್ಯವಾಗುತ್ತಿಲ್ಲ. ಅದರ ಅಂಕಿ-ಅಂಶಗಳನ್ನು ನೋಡಿದರೆ ನಾನೇ ಮೂರ್ಛೆ ಬೀಳಬಹುದು ಎಂದು ಸುಮ್ಮನಿದ್ದೇನೆ,” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲೆದಂಡವಾಗುತ್ತದೆ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ಬಿಟ್ ಕಾಯಿನ್ ಹಗರಣದಲ್ಲಿ ಪಕ್ಷದ ನಿರ್ಧಾರವನ್ನು ನಾನು ಈಗಾಗಲೇ ಹೇಳಿದ್ದೇನೆ,” ಎಂದರು.
ಹಗರಣದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರ ಮಗ ಭರತ್ ಬೊಮ್ಮಾಯಿ ಹೆಸರು ಕೇಳಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಯಾರ ಮಕ್ಕಳ ಹೆಸರು ಕೇಳಿ ಬರುತ್ತದೆಯೋ ಬರಲಿ. ನಾನು ದಾಖಲೆ ಇಲ್ಲದೇ ಬೇರೆಯವರಂತೆ ಬೇಕಾಬಿಟ್ಟಿ ಮಾತನಾಡಲು ಸಾಧ್ಯವಿಲ್ಲ,” ಎಂದು ಹೇಳಿದರು.
ಈ ಹಗರಣದಿಂದ ಬೊಮ್ಮಾಯಿ ಅವರ ಸರ್ಕಾರಕ್ಕೆ ಕಂಟಕ ಎದುರಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಯಾಕೆ ಬೇರೆಯವರ ಮೇಲೆ ಅನಗತ್ಯವಾಗಿ ಆರೋಪ ಮಾಡಲಿ. ತನಿಖೆಯಾಗಿ ಮಾಹಿತಿ ಹೊರಬರಲಿ. ಗೃಹ ಸಚಿವರೇನು ನಮ್ಮ ನಾಯಕರಾ?,” ಎಂದು ಮರುಪ್ರಶ್ನಿಸಿದರು. ಬಿಜೆಪಿಯ ಸಿ.ಟಿ. ರವಿ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ನಾನು ಅಧಿಕಾರದಲ್ಲಿಲ್ಲ. ಅಧಿಕಾರದಲ್ಲಿದ್ದಿದ್ದರೆ ಇಷ್ಟು ಹೊತ್ತಿಗೆ ಎಲ್ಲ ಮಾಹಿತಿ ಬಹಿರಂಗಪಡಿಸುತ್ತಿದ್ದೆ. ಕಾಂಗ್ರೆಸ್ ನಾಯಕರ ಮಗನ ವಿಚಾರ ಮಾತನಾಡುವುದಾದರೆ, ಆತ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಆತನನ್ನು ಬಂಧಿಸಲಿ. ಯಾವ ಆಧಾರದ ಮೇಲೆ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ತರುತ್ತಿದ್ದಾರೆ. ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದೇಕೆ? ಈ ಪ್ರಕರಣದಲ್ಲಿ ಯಾರ ಯಾರ ಹೆಸರೆಲ್ಲಾ ಕೇಳಿ ಬಂದಿದೆ? ಪ್ರಧಾನಿಗೆ ಪತ್ರ ಬರೆದಿದ್ದು ಯಾರು ಎಂದು ಗೃಹ ಮಂತ್ರಿಗೆ ಗೊತ್ತಿದೆಯಲ್ಲ, ಅವರು ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವುದೇಕೆ? ಈ ಎಲ್ಲ ಮಾಹಿತಿಗಳನ್ನು ಜನರ ಮುಂದೆ ಬಹಿರಂಗ ಪಡಿಸಲಿ.” “ನಮಗೆ ಈಗ ಬಂದಿರುವುದು ಪೊಲೀಸ್ ಇಲಾಖೆ ಹಾಗೂ ಬಿಜೆಪಿ ನಾಯಕರು, ಅಧಿಕಾರಿಗಳು ಕೊಟ್ಟಿರುವ ಹಿಂಬಾಗಿಲಿನ ಮಾಹಿತಿ. ಹೀಗಾಗಿ ಅಧಿಕಾರದಲ್ಲಿರುವ ಬಿಜೆಪಿ ನ್ಯಾಯಾಲಯಕ್ಕೆ ದಾಖಲೆ ನೀಡಲಿ, ಜನರ ಮುಂದೆ ಬಹಿರಂಗಪಡಿಸಲಿ,” ಎಂದರು.