ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ ಅವರಿಂದ ಗುಂಡ್ಲುಪೇಟೆಯಲ್ಲಿ ಡುಂಗ್ರಿ ಗೆರಾಸಿಯಾ ಸಮುದಾಯದ ಕುಂದುಕೊರತೆ ಆಲಿಕೆ

ಚಾಮರಾಜನಗರ, – ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ ಅವರು ಗುಂಡ್ಲುಪೇಟೆಯ ಡುಂಗ್ರಿ ಗೆರಾಸಿಯಾ ಸಮುದಾಯ ಜನರು ವಾಸಿಸುವ ಸ್ಥಳ ವೀಕ್ಷಿಸಿ ಸಮುದಾಯದ ಕುಂದುಕೊರತೆ ಆಲಿಸಿದರು.ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿರುವ ಪೆಂಜನಹಳ್ಳಿ ಬಳಿ ನಿನ್ನೆ (ಮೇ.1 ರಂದು) ಡುಂಗ್ರಿ ಗೆರಾಸಿಯಾ ಸಮುದಾಯದ ಕುಟುಂಬಗಳ ಜನಜೀವನ ವೀಕ್ಷಣೆ ಮಾಡಿದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ ಅವರು ಅಲ್ಲಿಯೇ ಇರುವ ಅಂಗನವಾಡಿ ಕಟ್ಟಡದ ಬಳಿ ಸಮುದಾಯದ ಸಭೆ ನಡೆಸಿ ಸಮಸ್ಯೆಗಳನ್ನು ಪರಾಮರ್ಶಿಸಿದರು.ಆರಂಭದಲ್ಲಿ ಸಭೆಯನ್ನು ಉದ್ದೇಶಿ ಮಾತನಾಡಿದ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ ಅವರು ಪರಿಶಿಷ್ಟ ಜಾತಿಯ 51, ಪರಿಶಿಷ್ಟ ಪಂಗಡದ 23 ಮತ್ತು 25 ಅರಣ್ಯವಾಸಿಗಳು ಸೇರಿದಂತೆ ಒಟ್ಟು 99 ಅಲೆಮಾರಿ ಜನಾಂಗಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಿರುವ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನ ಮೇರೆಗೆ ಈಗಾಗಲೇ 25 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಚಾಮರಾಜನಗರ ಜಿಲ್ಲೆ 26ನೇ ಜಿಲ್ಲೆಯಾಗಿದ್ದು ಅಲೆಮಾರಿ ಜನರ ವಾಸ್ತವ ಸಮಸ್ಯೆಗಳನ್ನು ಅರಿಯಲು ಇಲ್ಲಿಗೆ ಭೇಟಿ ನೀಡಲಾಗಿದೆ ಎಂದರು.
ಅಲೆಮಾರಿಗಳೆಂದರೇ ಚಿಂದಿ ಹಾಯುವವರು. ಕುಲಕಸುಬು ಹಾಗೂ ಪಾರಂಪರಿಕ ವೃತ್ತಿಯನ್ನು ಮುಂದುವರೆಸಿದ್ದಾರೆ. ಅವರನ್ನು ಸಾಮಾಜಿಕ, ಶೈಕ್ಷಣಿಕ, ಅರ್ಥಿಕ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಸಂಬಂಧಪಟ್ಟ ಅಧಿಕಾರಿಗಳು ತಲುಪಿಸಬೇಕಿದೆ. ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳ ಮಾಹಿತಿ ಅರಿವಿನ ಕೊರತೆ ಇದೆ. ಈ ನಿಟ್ಟಿನಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಬೇಕು. ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಅವಶ್ಯ ವೃತ್ತಿ ತರಬೇತಿಯನ್ನೂ ಸಹ ನೀಡಬೇಕು. ಆಗಮಾತ್ರ ಅಲೆಮಾರಿಗಳು ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದಿಂದ ಇಲ್ಲಿಗೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಇಲ್ಲಿನ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಆಹಾರದ ಸಮಸ್ಯೆ ಇರುವುದರಿಂದ ಸಂಚಾರಿ ನ್ಯಾಯಬೆಲೆ ಅಂಗಡಿ ವ್ಯವಸ್ಥೆ ಬೇಕು. ಸರ್ಕಾರದ ಸೌಲಭ್ಯ ಪಡೆಯಲು ಗುರುತಿನ ಚೀಟಿಗಳಿಲ್ಲ. ಸಮುದಾಯ ವಾಸಿಸುವ ಸ್ಥಳದಲ್ಲಿ ಕಾಡುಪ್ರಾಣಿಗಳು ವಿಷಜಂತುಗಳ ಹಾವಳಿ ಇದೆ. ಶೌಚಾಲಯಗಳ ಅಗತ್ಯವಿದೆ. ಉನ್ನತ ವ್ಯಾಸಂಗ ಮಾಡುವವರಿಗೆ ಶೈಕ್ಷಣಿಕ ಸಾಲ ಅವಶ್ಯವಾಗಿದೆ ಎಂಬುದು ಸೇರಿದಂತೆ ಸಭೆಯಲ್ಲಿ ಹಲವು ಸಮಸ್ಯೆಗಳನ್ನು ಸಮುದಾಯದ ಜನರು ನಿಗಮದ ಅಧ್ಯಕ್ಷರ ಬಳಿ ನಿವೇದಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ ಅವರು ಶಿಕ್ಷಣ ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು ಆಗಿದೆ. ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡಬೇಕು. ಇಲ್ಲಿ ಅಂಗನವಾಡಿ ಇದೆ. ಅಂಗನವಾಡಿ ನಂತರ 1ರಿಂದ 6ನೇ ತರಗತಿವರೆಗೆ ವಸತಿ ಶಾಲೆಗಳಲ್ಲಿ ಹಾಗೂ 6ರಿಂದ 12ನೇ ತರಗತಿವರೆಗೂ ಕ್ರೈಸ್ ಶಾಲೆಗಳಿಗೆ ಅಲೆಮಾರಿ ಮಕ್ಕಳನ್ನು ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ ಉಚಿತವಾಗಿ ಸೇರಿಸಲು ಅವಕಾಶವಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ತಮ್ಮ ಮಕ್ಕಳು ಚಿಂದಿ ಹಾಯುವುದನ್ನೆ ಅನುಸರಿಸದಂತೆ ಪೋಷಕರು ನಿಗಾವಹಿಸಬೇಕು ಎಂದ ಅವರು ಪ್ರತಿದಿನ 2 ಬಾರಿ ಡುಂಗ್ರಿ ಗೆರಾಸಿಯಾ ಸಮುದಾಯ ವಾಸಿಸುವ ಸ್ಥಳಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಲೆಮಾರಿ ಜನರು ಮೈಕ್ರೋ ಫೈನಾನ್ಸ್ ಕಂಪನಿಗಳು ನೀಡುವ ಸಾಲ ಪಡೆದು ಕಿರುಕುಳಕ್ಕೆ ಒಳಗಾಗಬಾರದು. ಪರ್ಯಾಯವಾಗಿ ಸರ್ಕಾರ ಮೈಕ್ರೋ ಕ್ರೆಡಿಟ್ ಪ್ರೇರಣಾ ಸಾಲ ಯೋಜನೆ ಜಾರಿಗೊಳಿಸಿದೆ. ಅದರ ಪ್ರಯೋಜನ ಪಡೆಯಬೇಕು. ಮುಂದಿನ ಒಂದು ತಿಂಗಳೊಳಗಾಗಿ ಈ ಸಮುದಾಯದ ಮಕ್ಕಳ ಶಾಲಾ ದಾಖಲಾತಿಗಾಗಿ ನೊಂದಣಿ ಆಂದೋಲನ ನಡೆಸಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಜಾಗೃತಿಗಾಗಿ ಅರಿವು ಶಿಬಿರಗಳನ್ನು ಏರ್ಪಡಿಸಬೇಕು. ನಿಗಮದಿಂದ ನೇರ ಸಾಲ ಕಲ್ಪಿಸಬೇಕು. ಅಲೆಮಾರಿಗಳಿಗೆ ಜನಸುರಕ್ಷಾ ಯೋಜನೆಯಡಿ ವಿಮೆ ಮಾಡಿಸಿಕೊಡಬೇಕು. ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವವರನ್ನು ಗುರುತಿಸಿ ಅವರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ಅಧಿಕಾರಿಗಳು ಮುಂದಾಗುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ನೇನೇಕಟ್ಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಶ್ರೀನಿವಾಸಮೂರ್ತಿ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.ಕುಂದುಕೊರತೆ ಸಭೆಗೂ ಮೊದಲು ಡುಂಗ್ರಿ ಗೆರಾಸಿಯಾ ಸಮುದಾಯ ಜನರು ವಾಸಿಸುವ ಮನೆಗಳು, ರಸ್ತೆ, ಇತರೆ ಸ್ಥಳಗಳನ್ನು ವೀಕ್ಷಿಸಿದರು.