
ಧರ್ಮಸ್ಥಳದ ಪಾವಿತ್ರ್ಯತೆ ಉಳಿಸಲು ಮೈಸೂರಿನಿಂದ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ನೇತೃತ್ವದಲ್ಲಿ ಇಂದು ಧರ್ಮಸ್ಥಳಕ್ಕೆ ಬೃಹತ್ ಕಾರು ರ್ಯಾಲಿ ತೆರಳಿತು.
ದಟ್ಟಗಳ್ಳಿಯಲ್ಲಿರುವ ಸಾ.ರಾ.ಕನ್ವೆನ್ಷನ್ ಹಾಲ್ ಮುಂಭಾಗದ ಗಣಪತಿ ದೇವಸ್ಥಾನದಲ್ಲಿ ಸಾ.ರಾ.ಮಹೇಶ್ ಹಾಗೂ ಜೆಡಿಎಸ್ ಮುಖಂಡರು ಪೂಜೆ ಸಲ್ಲಿಸಿದರು. ನಂತರ ರ್ಯಾಲಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಾ.ರಾ.ಮಹೇಶ್ ಮಾತನಾಡಿ, “ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಬಂದಾಗ ಬಹಳ ನೋವಾಗಿತ್ತು. ಈಗ ಸತ್ಯ ಹೊರಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಐಟಿ ನಿಷ್ಪಕ್ಷವಾಗಿ ತನಿಖೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಜೆಡಿಎಸ್ ಎಂಎಲ್ಸಿಗಳಾದ ಕೆ.ವಿವೇಕಾನಂದ, ಸಿ.ಎನ್.ಮಂಜೇಗೌಡ ಇತರ ಮುಖಂಡರು ಜೊತೆಗಿದ್ದರು.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಾಣದ ಕೈಗಳನ್ನು ಬಂಧಿಸಬೇಕು ಎಂದು ನಿನ್ನೆ (ಭಾನುವಾರ) ತಮ್ಮ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಆಗ್ರಹಿಸಿದ್ದರು. ಧರ್ಮಸ್ಥಳದ ವಿರುದ್ಧ ಅಪಪ್ರಚಾರವೆಸಗಿ, ಕಪ್ಪುಚುಕ್ಕೆ ತರಲು ಯತ್ನಿಸಿದ ಅನಾಮಿಕನೊಬ್ಬನನ್ನು ಬಂಧಿಸಿದರೆ ಸಾಲದು, ಷಡ್ಯಂತ್ರದ ಹಿಂದಿನ ಕಾಣದ ಕೈಗಳನ್ನು ಬಂಧಿಸಬೇಕು ಎಂದಿದ್ದರು.
ಅಲ್ಲದೆ, ರಾಜ್ಯದ ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿರುವುದು ನಿಜವಾಗಿದ್ದಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ಸತ್ಯ ಹೊರತರಬೇಕು. ದಕ್ಷಿಣ ಭಾರತದಲ್ಲೇ ಸೂಕ್ಷ್ಮಾತಿಸೂಕ್ಷ್ಮ ಸಮಾಜದ ಧಾರ್ಮಿಕ ಟ್ರಸ್ಟ್ ಆಗಿರುವ ಧರ್ಮಸ್ಥಳದಲ್ಲಿ ನೂರಾರು ವರ್ಷಗಳಿಂದ ಒಂದು ಹೆಣವನ್ನು ಹೂಳುವುದೇ ಕಷ್ಟಕರ. ಅಂತಹದರಲ್ಲಿ ನೂರಾರು ಹೆಣಗಳನ್ನು ಹೂಳುವುದಕ್ಕೆ ಸಾಧ್ಯವಿಲ್ಲ. ಒಬ್ಬನೇ ನಾಲ್ಕು ಅಡಿ ಗುಂಡಿ ತೋಡಿ ಹೂಳುವುದಕ್ಕೂ ಸಾಧ್ಯವೇ ಇಲ್ಲ ಎಂದು ಹೇಳಿದ್ದರು.


