
ಜಗತ್ತಿನ ಅತ್ಯಂತ ಹಿರಿಯ ಮ್ಯಾರಥಾನ್ ಪಟು, ‘ಟರ್ಬನ್ ಟೊರ್ನಾಡೊ’ ಎಂದೇ ಖ್ಯಾತರಾಗಿದ್ದ ಫೌಜಾ ಸಿಂಗ್ ಅವರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದ ಆರೋಪಿ ಕಾರು ಚಾಲಕನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ, ಪಂಜಾಬ್ನ ಜಲಂಧರ್ ಜಿಲ್ಲೆಯ ಕರ್ತಾರ್ಪುರದ ದಸೌಪುರ ಮೂಲದ ಅನಿವಾಸಿ ಭಾರತೀಯ (ಎನ್ಆರ್ಐ) ಅಮೃತ್ಪಾಲ್ ಸಿಂಗ್ ದಿಲೊನ್ (26) ಎಂಬಾತನನ್ನು ಬಂಧಿಸಲಾಗಿದ್ದು, ವಾಹನವನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಆರೋಪಿಯು ಸೋಮವಾರ ಭೋಗ್ಪುರದಿಂದ ಕಿಶಾಘರ್ಗೆ ವಾಹನದಲ್ಲಿ ಸಾಗುವಾಗ ಜಲಂಧರ್ ಪಠಾಣ್ಕೋಟ್ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 114 ವರ್ಷದ ಸಿಂಗ್ ಅವರಿಗೆ ಗುದ್ದಿದ್ದ. ಡಿಕ್ಕಿ ರಭಸಕ್ಕೆ ಸಿಂಗ್ ಅವರು ಗಾಳಿಯಲ್ಲಿ 5-7 ಅಡಿ ಎತ್ತರಕ್ಕೆ ಹಾರಿ ಕೆಳಗೆ ಬಿದ್ದಿದ್ದರು ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ರಾತ್ರಿ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿಯ ಅನಿವಾಸಿ ಭಾರತೀಯನಾಗಿದ್ದು(NRI) ಕುಟುಂಬವು ಕೆನಡಾದಲ್ಲಿ ನೆಲೆಸಿದೆ. ಇತ್ತೀಚೆಗೆ ಈತ ದಸೌಪುರಕ್ಕೆ ಆಗಮಿಸಿದ್ದ. ಸದ್ಯ ಪೊಲೀಸರ ವಶದಲ್ಲಿರುವ ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಘಟನೆ ಬಳಿಕ ಪೊಲೀಸರು ಅಪಘಾತ ನಡೆದ ಸ್ಥಳದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಸಿಂಗ್ ಅವರಿಗೆ ಪಂಜಾಬ್ ನೋಂದಣಿಯ ಟೊಯೋಟಾ ಫಾರ್ಚೂನರ್ ಕಾರು ಡಿಕ್ಕಿ ಹೊಡೆದಿರುವುದು ಕಂಡುಬಂದಿತ್ತು ಎಂದು ಜಲಂಧರ್ ಗ್ರಾಮೀಣ ವಿಭಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ವಿಂದರ್ ಸಿಂಗ್ ತಿಳಿಸಿದ್ದಾರೆ.
ಫೌಜಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಹಾಗೂ ಕ್ರೀಡಾಪಟುಗಳು ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದರು. ಪಂಜಾಬ್ ವಿಶೇಷ ವಿಧಾನಸಭಾ ಅಧಿವೇಶನದಲ್ಲೂ ಫೌಜಾ ಸಿಂಗ್ ಸಾವಿಗೆ ಸಂತಾಪ ಸೂಚಿಸಲಾಯಿತು.
1911ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಫೌಜಾ ಸಿಂಗ್, ಒಡಹುಟ್ಟಿದ ನಾಲ್ವರಲ್ಲಿ ಅತ್ಯಂತ ಕಿರಿಯರಾಗಿದ್ದರು. ಮ್ಯಾರಥಾನ್ನಲ್ಲಿ ಭಾಗವಹಿಸಿದ ಮೊದಲ ಶತಾಯುಷಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿವಿಧ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದ ಅವರು ಅನೇಕ ದಾಖಲೆಗಳನ್ನು ನಿರ್ಮಿಸಿದ್ದರು. ಲಂಡನ್, ನ್ಯೂಯಾರ್ಕ್ ಮತ್ತು ಹಾಂಗ್ ಕಾಂಗ್ನಲ್ಲಿನ ಪ್ರಸಿದ್ಧ ಮ್ಯಾರಥಾನ್ಗಳು ಒಳಗೊಂಡಂತೆ ಅವರು ವಿವಿಧೆಡೆ ತಮ್ಮ ಛಾಪು ಮೂಡಿಸಿದ್ದರು. ದುರ್ಬಲ ಕಾಲುಗಳೊಂದಿಗೆ ಜನಿಸಿದ್ದರೂ ಸಹ ಹಿರಿಯ ವಯಸ್ಸಿನಲ್ಲೂ ಅದ್ಭುತ ಯಶಸ್ಸು ಗಳಿಸುವ ಮೂಲಕ ವಿಸ್ಮಯವನ್ನುಂಟು ಮಾಡಿದ್ದರು.
2011ರಲ್ಲಿ ಅವರು ತಮಗೆ 100 ವರ್ಷ ತುಂಬಿದಾಗಲೂ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಟೊರೊಂಟೊದಲ್ಲಿ ನಡೆದ ಆಹ್ವಾನಿತ ಕೂಟದಲ್ಲಿ ಅವರು ತಮ್ಮ ವಯಸ್ಸಿನ ಗುಂಪಿಗೆ ಸೇರಿದ ಹಲವಾರು ವಿಶ್ವದಾಖಲೆಗಳನ್ನು ಮುರಿದಿದ್ದರು. ತಮ್ಮ ಓಟದ ವೃತ್ತಿಜೀವನದ ಹೆಚ್ಚಿನ ಭಾಗವನ್ನು ಬ್ರಿಟನ್ನಲ್ಲಿ ಕಳೆದ ಅವರು, ನಿವೃತ್ತರಾದ ಬಳಿಕ ಸುಮಾರು ಮೂರು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದರು.