ವಿದೇಶ
Trending

ಭಾರತ ಆಯ್ತು ಈಗ ಅಫ್ಘಾನಿಸ್ತಾನವೂ ನೀರು ನಿಲ್ಲಿಸಿದ್ರೆ ಪಾಕ್ ಸ್ಥಿತಿ ಅಧೋಗತಿ

ಕಾಬೂಲ್: ಪಾಕಿಸ್ತಾನ(Pakistan)ದ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಪಹಲ್ಗಾಮ್​ನಲ್ಲಿ ದಾಳಿ ನಡೆಸಿ 26 ಅಮಾಯಕರ ಪ್ರಾಣ ತೆಗೆದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಪಾಕಿಸ್ತಾನ ನೀರಿನ ಬಿಕ್ಕಟ್ಟಿನ ಭೀತಿಯನ್ನು ಎದುರಿಸುತ್ತಿದೆ. ಏತನ್ಮಧ್ಯೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಹಾಗೂ ಮಿರ್ ಯಾರ್ ಬಲೂಚ್ ಪೋಸ್ಟ್​​ ಭಾರತೀಯ ಮೊಗದಲ್ಲಿ ನಗು ತರಿಸಿದರೆ ಪಾಕ್​ಗೆ ಕಣ್ಣೀರೇ ಗತಿ.ಭಾರತದ ಬಳಿಕ ಅಫ್ಘಾನಿಸ್ತಾನ ಕೂಡ ಪಾಕಿಸ್ತಾನಕ್ಕೆ ಹೋಗುವ ನೀರಿನ ಸರಬರಾಜನ್ನು ನಿಲ್ಲಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಫ್ಘಾನಿಸ್ತಾನವು ಕಾಬೂಲ್ ಮತ್ತು ಕುನಾರ್ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸುವ ತನ್ನ ಯೋಜನೆಯನ್ನು ಮರುಪರಿಶೀಲಿಸಿದೆ. ಅಲ್ಲಿನ ಸರ್ಕಾರ ಕಾಬೂಲ್ ಮತ್ತು ಕುನಾರ್ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರನ್ನು ನಿಲ್ಲಿಸುತ್ತದೆ. ಇದನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲುವುದು ಎಂದು ಕರೆಯಲಾಗುತ್ತದೆ ಎಂದು ನಿಶಿಕಾಂತ್ ಬರೆದಿದ್ದಾರೆ.

ಅಫ್ಘಾನಿಸ್ತಾನ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮಾತುಕತೆ ಮೇ 15 ರಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಅಫ್ಘಾನಿಸ್ತಾನದ ವಿದೇಶಾಂಗ ಸಚಿವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಕಾಬೂಲ್ ನದಿಗೆ ನಿರ್ಮಿಸಲಾಗುವ ಶಹತೂತ್ ಅಣೆಕಟ್ಟು ಯೋಜನೆಯನ್ನು ಮುನ್ನಡೆಸುವ ಭಾರತದ ಬದ್ಧತೆಯನ್ನು ಸಹ ಮಾತುಕತೆಗಳು ಒಳಗೊಂಡಿವೆ. ಈ ಸುದ್ದಿ ಹೊರಬಂದ ನಂತರ, ನೀರಿನ ಬಗ್ಗೆ ಪಾಕಿಸ್ತಾನದಲ್ಲಿ ಕಳವಳ ಮತ್ತಷ್ಟು ಹೆಚ್ಚಿವೆ.ಮಲ್ಬೆರಿ ಅಣೆಕಟ್ಟು ಯೋಜನೆಯು ಜಲವಿದ್ಯುತ್ ಮತ್ತು ನೀರಾವರಿ ಯೋಜನೆಯಾಗಿದೆ. ಇದಕ್ಕೆ ಭಾರತದಿಂದ ಹಣಕಾಸು ನೆರವು ದೊರೆಯುತ್ತದೆ. ಇದರ ಬೆಲೆ ಸುಮಾರು 236 ಮಿಲಿಯನ್ ಡಾಲರ್‌ಗಳು. ಈ ಯೋಜನೆಯ ಮೂಲಕ, ಅಫ್ಘಾನಿಸ್ತಾನದಲ್ಲಿ ಜಲ ಮೂಲಸೌಕರ್ಯವನ್ನು ಬಲಪಡಿಸುವ ಕೆಲಸವನ್ನು ಮಾಡಲಾಗುವುದು. ಇದು ಅಫ್ಘಾನಿಸ್ತಾನದಲ್ಲಿ ಸುಮಾರು 4000 ಹೆಕ್ಟೇರ್ ಭೂಮಿಗೆ ನೀರಾವರಿ ಮತ್ತು ಸುಮಾರು 2 ಮಿಲಿಯನ್ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತದೆ.

ಪಾಕಿಸ್ತಾನಕ್ಕಾಗುವ ನಷ್ಟ ಏನು? ಕಾಬೂಲ್ ನದಿಯು ಅಫ್ಘಾನಿಸ್ತಾನದ ಹಿಂದೂಕುಶ್ ಪರ್ವತಗಳ ಮೂಲಕ ಹರಿದು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಕ್ಕೆ ಹೋಗುವ ಜಲಮಾರ್ಗವನ್ನು ಸೇರುತ್ತದೆ. ಇದು ಸಿಂಧೂ ನದಿ ವ್ಯವಸ್ಥೆಯ ಭಾಗವಾಗಿದ್ದು, ಪಾಕಿಸ್ತಾನಕ್ಕೆ ಜೀವನಾಡಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ನದಿಗೆ ಅಫ್ಘಾನಿಸ್ತಾನ ಅಣೆಕಟ್ಟು ನಿರ್ಮಿಸಿದರೆ, ನೀರಿನ ಹರಿವಿನಲ್ಲಿ ಕಡಿತ ಮತ್ತು ಅಡಚಣೆ ಉಂಟಾಗಬಹುದು, ಇದು ಪಾಕಿಸ್ತಾನವನ್ನು ಚಿಂತೆಗೀಡುಮಾಡುತ್ತಿದೆ. ಈ ರೀತಿಯಾಗಿ, ಅಫ್ಘಾನಿಸ್ತಾನದ ಈ ಯೋಜನೆಯಿಂದಾಗಿ ಪಾಕಿಸ್ತಾನ ನಿದ್ರಾಹೀನವಾಗಿದೆ.ಬಲೂಚ್ ಬರಹಗಾರ ಮಿರ್ ಯಾರ್ ಬಲೂಚ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿ, ಇದು ಪಾಕಿಸ್ತಾನದ ಅಂತ್ಯದ ಆರಂಭ. ಭಾರತದ ನಂತರ, ಈಗ ಅಫ್ಘಾನಿಸ್ತಾನವು ಪಾಕಿಸ್ತಾನಕ್ಕೆ ತನ್ನ ನೀರಿನ ಹರಿವನ್ನು ಕಡಿತಗೊಳಿಸಲು ಅಣೆಕಟ್ಟುಗಳನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ ಅಧಿಕೃತವಾಗಿ ಕಾಬೂಲ್‌ನಲ್ಲಿರುವ ತಾಲಿಬಾನ್ ಆಡಳಿತದಿಂದ ಅಥವಾ ಇಸ್ಲಾಮಾಬಾದ್‌ನಿಂದ ಯಾವುದೇ ದೃಢೀಕರಣ ಬಂದಿಲ್ಲ.

ತಾಲಿಬಾನ್ ಉನ್ನತ ಅಧಿಕಾರಿ ಜನರಲ್ ಮುಬಿನ್ ಇತ್ತೀಚೆಗೆ ಪೂರ್ವ ಅಫ್ಘಾನಿಸ್ತಾನ ಪ್ರಾಂತ್ಯದ ಕುನಾರ್‌ಗೆ ಪ್ರವಾಸ ಕೈಗೊಂಡಿದ್ದರು, ಈ ಮೂಲಕ ಕುನಾರ್ ನದಿ ಪಾಕಿಸ್ತಾನಕ್ಕೆ ಹರಿಯುತ್ತದೆ. ಕಾಬೂಲ್ ನದಿಯ ಪ್ರಮುಖ ಉಪನದಿಯಾದ ಕುನಾರ್ ನದಿಯು ವಾಯುವ್ಯ ಪಾಕಿಸ್ತಾನದ ಕೃಷಿ ಭೂಮಿಗೆ ಸಿಹಿನೀರಿನ ಪ್ರಮುಖ ಮೂಲವಾಗಿದೆ.ಇದು ಪೂರ್ವ (ಅಫ್ಘಾನಿಸ್ತಾನ) ಮತ್ತು ಪಶ್ಚಿಮ (ಭಾರತ) ಎರಡೂ ಕಡೆಗಳಿಂದ ನೀರಿನ ಸರಬರಾಜನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಈಗಾಗಲೇ ನೀರಿನ ಕೊರತೆ ಮತ್ತು ನಿರ್ವಹಣಾ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನದ ಕೃಷಿ ಆಧಾರಿತ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಪಾಕಿಸ್ತಾನ ಅಪೌಷ್ಠಿಕತೆ ಪಾಕಿಸ್ತಾನದ 1.1 ಕೋಟಿಗೂ ಹೆಚ್ಚು (11 ಮಿಲಿಯನ್) ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ, ಹಲವರು ಹಸಿವಿನ ಅಂಚಿನಲ್ಲಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಜಾಗತಿಕ ಆಹಾರ ಪೂರೈಕೆದಾರರಾಗಿ ಹೊರಹೊಮ್ಮಿದ ಭಾರತಕ್ಕೆ ತದ್ವಿರುದ್ಧವಾಗಿ, ಪಾಕಿಸ್ತಾನವು ತನ್ನ ದೇಶದ ಜನರಿಗೆ ಆಹಾರವನ್ನು ನೀಡಲು ಹೆಣಗಾಡುತ್ತಿದೆ. ಮೇ 16ರ ಶುಕ್ರವಾರದಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಬಿಡುಗಡೆ ಮಾಡಿದ ಆಹಾರ ಬಿಕ್ಕಟ್ಟುಗಳ ಜಾಗತಿಕ ವರದಿ 2025ರಲ್ಲಿ ಈ ವಿಷಯಗಳು ಬಹಿರಂಗಗೊಂಡಿವೆ.ಪಾಕಿಸ್ತಾನದಲ್ಲಿ ಅದರಲ್ಲೂ ವಿಶೇಷವಾಗಿ ಬಲೂಚಿಸ್ತಾನ್, ಸಿಂಧ್ ಮತ್ತು ಖೈಬರ್ ಪಖ್ತುಂಖ್ವಾದಂತಹ ಸಂಘರ್ಷ ಪೀಡಿತ ಮತ್ತು ಬಡ ಪ್ರದೇಶಗಳಲ್ಲಿ ಆಹಾರ ಅಭದ್ರತೆಯ ಭೀಕರ ಚಿತ್ರಣವನ್ನು ಈ ವರದಿ ಚಿತ್ರಿಸುತ್ತದೆ. ಈ ವರದಿಯ ಪ್ರಕಾರ, 1.1 ಕೋಟಿ ಜನರು ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ, ಸುಮಾರು 17 ಲಕ್ಷ ಜನರು FAO ‘ತುರ್ತು’ ಪರಿಸ್ಥಿತಿಗಳು ಎಂದು ವರ್ಗೀಕರಿಸಿದ್ದಾರೆ.ಈ ಅಂಕಿ-ಅಂಶಗಳು 2024ಕ್ಕೆ ಹೋಲಿಸಿದರೆ ಜನಸಂಖ್ಯಾ ವ್ಯಾಪ್ತಿಯಲ್ಲಿ ಶೇ. 38ರಷ್ಟು ತೀವ್ರ ಹೆಚ್ಚಳವನ್ನು ಸೂಚಿಸುತ್ತವೆ. ಇದು ಪಾಕಿಸ್ತಾನದ ಆಹಾರ ಬಿಕ್ಕಟ್ಟು ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಸೂಚಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button