ಕ್ರೀಡೆ
Trending

ಸಂಜು ಸ್ಯಾಮ್ಸನ್ ನಾಯಕತ್ವ ವಹಿಸಲು ಹಸಿರು ನಿಶಾನೆ! ರಾಜಸ್ಥಾನ ರಾಯಲ್ಸ್ ಗೆ ಬಂತು ಆನೆಬಲ

ನಾಯಕ ಸಂಜು ಸ್ಯಾಮ್ಸನ್ ಅವರ ಗಾಯದ ಸಮಸ್ಯೆಯಿಂದಾಗಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸಾಕಷ್ಟು ಏರುಪೇರುಗಳಾಗಿದ್ದವು. ಜೊತೆಗೆ ಅದು ಫಲಿತಾಂಶದ ಮೇಲೂ ಪರಿಣಾಮ ಬೀರಿತ್ತು. ಇದೀಗ ಬಂದಿರುವ ಗುಡ್ ನ್ಯೂಸ್ ಎಂದರೆ ಸಂಜು ಸ್ಯಾಮ್ಸನ್ ಅವರು ಕೈಬೆರಳಿನ ಗಾಯದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಬ್ಯಾಟಿಂಗ್ ನೊಂದಿಗೆ ವಿಕೆಟ್ ಹಿಂದುಗಡ ಸಹ ಕಾರ್ಯ ನಿರ್ವಹಿಸಬಹುದು ಎಂದು ಬೆಂಗಳೂರಿನಲ್ಲಿನಲ್ಲಿರುವ ಸೆಂಟರ್ ಆಫ್ ಎಕ್ಷಲೆನ್ಸ್ ಇದೀಗ ಹಸಿರು ನಿಶಾನೆ ತೋರಿದೆ. ಈ ಬಗ್ಗೆ ಕೇಂದ್ರದ ಮೂಲಗಳು ಖಚಿತಪಡಿಸಿವೆ.ಹೀಗಾಗಿ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಅವರು ತಂಡದ ಸಾರಥ್ಯವನ್ನು ವಹಿಸಲಿದ್ದಾರೆ. ಪರಿಣಾಮ ಹಂಗಾಮಿ ನಾಯಕನ ಅಡಿಯಲ್ಲಿ ಗಲಿಬಿಲಿಗೊಳಗಾದಂತೆ ಕಾಣುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಇದೀಗ ಆನೆ ಬಲ ಬಂದಂತಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ 5ನೇ ಟಿ20 ಪಂದ್ಯದಲ್ಲಿ ಅವರ ಕೈಬೆರಳಿಗೆ ಗಾಯವಾಗಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆಯೊಂದಿಗೆ ಶಸ್ತ್ರಚಿಕಿತ್ಸೆಯನ್ನೂ ನೆಡೆಸಲಾಯಿತು. ಒಂದು ತಿಂಗಳಲ್ಲಿ ಸಂಜು ಅವರು ಗುಣಮಖರಾದರೂ ವೈದ್ಯರು ಅವರಿಗೆ ಕೀಪಿಂಗ್ ನಡೆಸಲು ಅನುಮತಿ ನೀಡಿರಲಿಲ್ಲ. ಕೇವಲ ಬ್ಯಾಟಿಂಗ್ ಮಾತ್ರ ನಡೆಸಬಹುದು ಎಂಬ ಸೂಚನೆಯನ್ನು ನೀಡಿದ್ದರು. ಈ ವೇಳೆ ತಂಡದ ಮ್ಯಾನೇಜ್ ಮೆಂಟ್ ರಿಯಾನ್ ಪರಾಗ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಕೇವಲ ಬ್ಯಾಟರ್ ಆಗಿ ತಂಡದಲ್ಲಿ ಇರಿಸಿಕೊಳ್ಳಲಾಯಿತು. ಧ್ರುವ ಜ್ಯುರೆಲ್ ಅವರು ವಿಕೆಟ್ ಕೀಪರ್ ಕಾರ್ಯವನ್ನು ನಿರ್ವಹಿಸಿದರು. ಈ ಕಾರಣಕ್ಕಾಗಿಯೇ ಪ್ರಾರಂಭದ ಮೂರು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ ಸಂಜು ಸ್ಯಾಮ್ಸನ್ ಅವರು ಬ್ಯಾಟಿಂಗ್ ಗೆ ಮಾತ್ರ ಆಗಮಿಸಿದ್ದರು.ಚೆನ್ನೈ ವಿರುದ್ಧ ಪಂದ್ಯ ಮುಗಿದ ಬಳಿಕ ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ತೆರಳಿದ್ದ ಅವರು ಇದೀಗ ತಮ್ಮ ಫಿಟ್ವೆಸ್ ಅನ್ನು ಖಾತ್ರಿ ಪಡಿಸಿದ್ದಾರೆ. ಇದೀಗ ಸಂಜು ಸ್ಯಾಮ್ಸನ್ ಅವರು ಪೂರ್ಣ ಪ್ರಮಾಣದಲ್ಲಿ ಮರಳಿ ಬಂದಿರುವುದರಿಂದ ರಿಯಾನ್ ಪರಾಗ್ ಅವರು ನಾಯಕತ್ವದಿಂದ ಮುಕ್ತರಾಗಲಿದ್ದಾರೆ. ವಿಕೆಟ್ ಕೀಪಿಂಗ್ ಕಾರ್ಯ ನಿರ್ವಹಿಸುತ್ತಿದ್ದ ಧ್ರುವ ಜ್ಯುರೆಲ್ ಅವರನ್ನು ಉಳಿಸಿಕೊಳ್ಳತ್ತಾರಾ ಇಲ್ಲವಾ ಎಂಬ ಬಗ್ಗೆ ಯಾವುದೇ ಖಾತ್ರಿಯಿಲ್ಲ.

ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ನಡೆಸಿದ್ದ ಸಂಜು ಸ್ಯಾಮ್ಸನ್ ಅವರು ಸನ್ ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 66, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 13 ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ರನ್ ಗಳಿಸಿದ್ದರು. ಈ ಬಾರಿ ರಾಜಸ್ಥಾನ ರಾಯಲ್ಸ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಪರಾಭವಗೊಂಡು ಮೂರನೇ ಪಂದ್ಯವನ್ನು ಜಯಿಸಿದೆ. ಸಂಜು ಸ್ಯಾಮ್ಸನ್ ನಾಯಕರಾಗಿ ಕಾರ್ಯ ನಿರ್ವಹಿಸಲು ಅನುಮತಿ ದೊರೆತಿರುವುದರಿಂದ ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಮುಂದುವರಿಯುವ ನಿರೀಕ್ಷೆಯಿದೆ.


Related Articles

Leave a Reply

Your email address will not be published. Required fields are marked *

Back to top button