
ಬೆಂಗಳೂರು: ಕೇಂದ್ರ ಸರ್ಕಾರ ಮಾಡಿರುವ ವಕ್ಫ್ ತಿದ್ದುಪಡಿಯ ಕುರಿತಾದ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವಕ್ಫ್ ತಿದ್ದುಪಡಿ ಮುಸ್ಲಿಮರ ವಿರುದ್ಧವಾಗಿದೆ ಎಂದು ಕರ್ನಾಟಕ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಾಅದಿ ಆರೋಪ ಮಾಡಿದ್ದರು.‘ವಿಜಯ ಕರ್ನಾಟಕ ವೆಬ್’ ಜೊತೆಗಿನ ಸಂದರ್ಶನದಲ್ಲಿ ತಿದ್ದುಪಡಿ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದ್ದರು. ಆದರೆ ಬಿಜೆಪಿ ಇದನ್ನು ನಿರಾಕರಣೆ ಮಾಡಿದೆ. ವಕ್ಫ್ ತಿದ್ದುಪಡಿ ಮುಸ್ಲಿಂ ವಿರೋಧಿ ಅಲ್ಲ, ಬಲಾಢ್ಯರು ಹಾಗೂ ಭೂ ಕಬಳಿಕೆದಾರರ ವಿರುದ್ಧ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಚಾರ್ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತಾದ ಸಂದರ್ಶನ ಇಲ್ಲಿದೆ.
ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದರಲ್ಲಿ ತಪ್ಪೇನಿದೆ? ವಕ್ಫ್ ಎಂಬುವುದು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದಲ್ಲ. ಅದರಲ್ಲಿ ಯಾರೂ ಮಧ್ಯ ಪ್ರವೇಶ ಮಾಡಬಾರದು ಎಂದಿಲ್ಲ. ವಕ್ಫ್ ಹೆಸರಿನಲ್ಲಿ ಸಾವಿರಾರು ಎಕರೆ ಕಬಳಿಸಿ ದುರುಪಯೋಗ ಮಾಡಿಕೊಂಡರೆ ಸರ್ಕಾರ ಸುಮ್ಮನಿರಲು ಸಾಧ್ಯವೇ? ಅನ್ವರ್ ಮಾಣಿಪ್ಪಾಡಿ ವರದಿ 59,000 ಎಕರೆ ವಕ್ಫ್ ಆಸ್ತಿ ಬೇರೆ ಯವರ ಪಾಲಾಗಿತ್ತು. ವಕ್ಫ್ ಆಸ್ತಿ ಇರುವುದು ಬಡ ಮುಸ್ಲಿಮರಿಗಾಗಿ. ಆದರೆ ಅವರಿಗೆ ಇದರಿಂದ ಯಾವುದೇ ಉಪಯೋಗ ಆಗುತ್ತಿರಲಿಲ್ಲ. ಹೀಗಾಗಿ ವಕ್ಫ್ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕಾದ ಅಗತ್ಯ ಬಂದಿತ್ತು. ಇದು ಮುಸ್ಲಿಂ ವಿರೋಧಿ ನಡೆ ಅಲ್ಲ. ಬಲಾಢ್ಯರು ಹಾಗೂ ಭೂ ಕಬಳಿಕೆದಾರರ ವಿರುದ್ಧವಾಗಿದೆ. (ವಕ್ಫ್ ಮಸೂದೆ ವಿರುದ್ಧ ರಾಷ್ಟ್ರವ್ಯಾಪ್ತಿ ಚಳುವಳಿಕೆ ಸಿದ್ಧರಾಗುತ್ತಿದ್ದೇವೆ)
ಮಸೀದಿ ಸಮಿತಿ, ದರ್ಗಾ ಸಮಿತಿಯಲ್ಲಿ ಹಿಂದೂಗಳನ್ನು ಸದಸ್ಯರನ್ನಾಗಿ ಮಾಡಿದ್ದರೆ ಅದನ್ನು ಪ್ರಶ್ನೆ ಮಾಡಬಹುದಿತ್ತು. ಆದರೆ ವಕ್ಫ್ ಆಸ್ತಿ ಧಾರ್ಮಿಕ ಭಾಗವಲ್ಲ. ಹಿಂದೂಗಳ ಆಸ್ತಿಯೂ ವಕ್ಫ್ ಪಾಲಾಗಿದೆ. ಬಾಧಿತರ ಪರವಾಗಿ ಧ್ವನಿ ಎತ್ತಬೇಕಾಗಿದೆ. ಹೀಗಾಗಿ ಭಿನ್ನ ಧರ್ಮೀಯರು ಮಂಡಳಿಯಲ್ಲಿ ಬೇಕಾಗುತ್ತದೆ. ಯಾರೋ ಕೆಲವರ ಕಪಿಮುಷ್ಠಿಯಲ್ಲಿ ವಕ್ಫ್ ಆಸ್ತಿ ಇದೆ. ವಕ್ಫ್ ಮೂಲ ಉದ್ದೇಶ ಬಡ ಮುಸ್ಲಿಮರ ಉನ್ನತೀಕರಣಕ್ಕೆ ಬಳಕೆ ಮಾಡಬೇಕಿದೆ. ವಕ್ಫ್ ಮಂಡಳಿಯಲ್ಲಿ ನಿಸ್ಪಕ್ಷಪಾತ ತೀರ್ಮಾನ ಆಗಬೇಕು ಎಂದಾದರೆ ಎಲ್ಲಾ ಧರ್ಮೀಯ ಸದಸ್ಯರು ಇರಬೇಕು. (ವಕ್ಫ್ ಮಸೂದೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?)
ವಕ್ಫ್ ಕಾರ್ಯಚಟುವಟಿಕೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ವಕ್ಫ್ ತಿದ್ದುಪಡಿಯ ವಿರುದ್ಧ ಕಾಂಗ್ರೆಸ್, ಆರ್ ಜೆಡಿ, ಡಿಎಂಕೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ ಅಂತಿದ್ದಾರೆ. ಆದರೆ ಈ ಪಕ್ಷಗಳ ಮುಖಂಡರು ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರಾ? ಅಕ್ರಮ ನುಸುಳಿಗರ ವಿರುದ್ಧ ಮಾತನಾಡಿದ್ದಾರಾ? ಇವರ ಟಾರ್ಗೆಟ್ ಕೇವಲ ಹಿಂದೂ ಆಗಿದ್ದಾರೆ.
ಒಂದು ವೆಬ್ ಸೈಟ್ ನಲ್ಲಿ ಎಲ್ಲಾ ಧರ್ಮಗಳ ಆಸ್ತಿ ವಿವರ ನೀಡಲಾಗಿತ್ತು. ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಇದು ಕೇವಲ ಅಂಕಿ- ಅಂಶವಷ್ಟೇ. ವಕ್ಫ್ ಆಸ್ತಿಯನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳುವ ಉದ್ದೇಶ ಇಲ್ಲ ಎಂದು ತಿದ್ದುಪಡಿಯಲ್ಲೇ ನೀಡಲಾಗಿದೆ. ಕೇರಳದ ಬಿಷಪ್ ವಕ್ಫ್ ಬಿಲ್ ಗೆ ಬೆಂಬಲ ನೀಡಿದ್ದಾರೆ. ರಾಹುಲ್ ಗಾಂಧಿ ವಿಚಲಿತರಾಗಿದ್ದಾರೆ. ಓಟ್ ಬ್ಯಾಂಕ್ ಗೆ ಕುತ್ತು ಬರುತ್ತದೆ ಎಂದು ಟ್ವಿಸ್ಟ್ ನೀಡಲಾಗಿದೆ. ಇದರಲ್ಲಿ ಸತ್ಯ ಇಲ್ಲ. ಅಸಹಾಯಕತೆಯಿಂದ ಇಂತಹ ಕುಚೇಷ್ಟೆ ಮಾಡುತ್ತಿದ್ದಾರೆ.