ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿ.

ಕರ್ನಾಟಕದ ಬಿಜೆಪಿ ನಾಯಕರ ವಿರುದ್ಧ ತಮ್ಮ ಟೀಕಾಸ್ತ್ರವನ್ನು ಸತತವಾಗಿ ಪ್ರಯೋಗಿಸುತ್ತಲೇ ಬಂದಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ನ ಶಿಸ್ತುಪಾಲನಾ ಸಮಿತಿ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಇನ್ನಿತರ ನಾಯಕರ ವಿರುದ್ಧ ಬಹಿರಂಗವಾಗಿ ಆರೋಪಗಳನ್ನು ಮಾಡುತ್ತಿರುವ ಯತ್ನಾಳ್ ಅವರು ನೋಟಿಸ್ ತಲುಪಿದ 78 ಗಂಟೆಗಳೊಳಗೆ ಶಿಸ್ತು ಸಮಿತಿಯ ಮುಂದೆ ಹಾಜರಾಗಿ ಉತ್ತರಿಸಬೇಕೆಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಅಸಲಿಗೆ, ಕಳೆದ ವರ್ಷ ಡಿಸೆಂಬರ್ ನಲ್ಲಿಯೂ ಯತ್ನಾಳ್ ಅವರಿಗೆ ಶಿಸ್ತುಪಾಲನಾ ಸಮಿತಿಯಿಂದ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ಆ ನೋಟಿಸ್ ಗೆ ಯತ್ನಾಳ್ ಕ್ಯಾರೇ ಅಂದಿರಲಿಲ್ಲ. ಅದಕ್ಕೂ ಮುನ್ನವೂ ಜಾರಿಗೊಳಿಸಲಾಗಿದ್ದ ನೋಟಿಸ್ ಗೆ ಯತ್ನಾಳ್ ಉತ್ತರಿಸುವ ಗೋಜಿಗೇ ಹೋಗಿರಲಿಲ್ಲ. ಅದಕ್ಕಾಗಿ ಈಗ ಮತ್ತೊಂದು ನೋಟಿಸ್ ಜಾರಿಗೊಳಿಸಲಾಗಿದೆ. ಈಗ ಯತ್ನಾಳ್ ಅವರು ಏನು ಮಾಡುತ್ತಾರೆ, ಶಿಸ್ತುಪಾಲನಾ ಸಮಿತಿಯ ಮುಂದೆ ಹಾಜರಾಗುತ್ತಾರೋ ಅಥವಾ ದೂರ ಉಳಿಯುತ್ತಾರೋ. ಹಾಗೊಂದು ವೇಳೆ ದೂರ ಉಳಿದರೆ ಬಿಜೆಪಿ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳಲಿದೆ ಎಂಬಿತ್ಯಾದಿ ಕುತೂಹಲ ಮೂಡಿವೆ.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ. ಇತ್ತೀಚೆಗೆ, ಇಬ್ಬರೂ ನಾಯಕರು ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ. ಅಸಲಿಗೆ, ಯತ್ನಾಳ್ ಅವರು ಕರ್ನಾಟಕ ಬಿಜೆಪಿ ಮೇಲೆ ಯಡಿಯೂರಪ್ಪ ಹಾಗೂ ಅವರ ಪುತ್ರರ ಹಿಡಿತವನ್ನು ಸಡಿಸುವ ಇರಾದೆ ಹೊಂದಿದ್ದಾರೆ.
ಯತ್ನಾಳ್ ಹಾಗೂ ರೆಬೆಲ್ ತಂಡದ ಆಣತಿಯಿಂತೆ ಬಿಜೆಪಿ ಹೈಕಮಾಂಡ್ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಸದ್ಯದಲ್ಲೇ ಚುನಾವಣೆ ನಡೆಸುವುದಾಗಿ ಹೇಳಿದೆ. ರಾಜ್ಯಧ್ಯಕ್ಷ ಚುನಾವಣೆಗೆ ಯತ್ನಾಳ್ ಬಣದ ಒಬ್ಬರು ನಿಲ್ಲುವುದು ಪಕ್ಕಾ ಆಗಿದೆ. ಅತ್ತ, ಬಿವೈ ವಿಜಯೇಂದ್ರ ಹಾಗೂ ಅವರ ಆಪ್ತರ ಬಣದಲ್ಲಿ ಒಬ್ಬರು (ಪ್ರಾಯಶಃ ವಿಜಯೇಂದ್ರ ನಿಂತರೂ ಅಚ್ಚರಿಯಿಲ್ಲ) ಚುನಾವಣೆಗೆ ನಿಲ್ಲಬಹುದು. ಆದರೆ, ಯಾರೇ ನಿಂತರೂ ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಯತ್ನಾಳ್ ತಿಳಿಸಿದ್ದಾರೆ.
ವಕ್ಫ್ ಆಸ್ತಿ ವಿವಾದದ ಕುರಿತು, ಯತ್ನಾಳ್ ಅವರು ವಿಜಯೇಂದ್ರ ಅವರ ಅನುಮತಿ ಇಲ್ಲದೆ ಪ್ರತ್ಯೇಕ ಹೋರಾಟವನ್ನು ಆರಂಭಿಸಿದ್ದು, ಇದರಿಂದ ಪಕ್ಷದೊಳಗಿನ ಒಗ್ಗಟ್ಟು ಪ್ರಶ್ನೆಗೆ ಒಳಗಾಗಿದೆ. ಯತ್ನಾಳ್ ಅವರ ಈ ಕ್ರಮಕ್ಕೆ ಸ್ವಕ್ಷೇತ್ರ ವಿಜಯಪುರದಲ್ಲಿಯೇ ವಿರೋಧ ವ್ಯಕ್ತವಾಗಿದೆ. ಇದೇ ವೇಳೆ, ಯತ್ನಾಳ್ ಬಣದ ನಾಯಕರು ವಕ್ಫ್ ವಿವಾದದ 2ನೇ ಹಂತದ ಹೋರಾಟಕ್ಕೆ ಸಿದ್ಧತೆ ನಡೆಸಿದ್ದು, ಈ ಕುರಿತು ಗೌಪ್ಯ ಸಭೆಗಳನ್ನು ನಡೆಸಿದ್ದಾರೆ. ಇದು ಪಕ್ಷದ ಆಂತರಿಕ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಬೆಳವಣಿಗೆಗಳು ಕರ್ನಾಟಕ ಬಿಜೆಪಿ ಪಕ್ಷದ ಆಂತರಿಕ ಒಗ್ಗಟ್ಟಿಗೆ ಸವಾಲುಗಳನ್ನು ಉಂಟುಮಾಡುತ್ತಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಗಮನ ಹರಿಸಲಾಗಿದೆ.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಯಾವುದೇ ಪ್ರತಿಭಟನೆ ನಡೆಸಿದರೂ ಅದರಲ್ಲಿ ಯತ್ನಾಳ್ ಬಣ ಪಾಲ್ಗೊಳ್ಳದೇ ತಾವೇ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲು ಮುಂದಾದುವ ಮೂಲಕ ವಿಜಯೇಂದ್ರ ಅವರ ನಾಯಕತ್ವಕ್ಕೆ ಸಡ್ಡು ಹೊಡೆದಿದ್ದರು. ಸಿದ್ದರಾಮಯ್ಯನವರ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿ.ವೈ. ವಿಜಯೇಂದ್ರ ನಾಯಕತ್ವದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ನಾಯಕರು ಪಾದಯಾತ್ರೆ ನಡೆಸಿದ್ದಾಗ ಅದರಲ್ಲಿ ಯತ್ನಾಳ್ ಭಾಗವಹಿಸಿರಲಿಲ್ಲ. ಅವರ ಜೊತೆಗೆ, ಬಿಜೆಪಿಯ ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ ಮುಂತಾದ ನಾಯಕರು ಇದ್ದಾರೆ.