ಇತ್ತೀಚಿನ ಸುದ್ದಿರಾಜ್ಯಸುದ್ದಿ

ಮೈಕ್ರೋ ಫೈನಾನ್ಸ್‌ ಕಿರಿಕ್‌ ತಡೆಗೆ ತುಮಕೂರಿನಲ್ಲಿ ಸಹಾಯವಾಣಿ ಆರಂಭ.

ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆಯಲು ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆಗೆ ಜಿಲ್ಲಾಡಳಿತ ಕ್ರಮವಹಿಸಿದೆ. ಸರಕಾರದ ಆದೇಶ, ಮೈಕ್ರೋ ಫೈನಾನ್ಸ್‌ ನಿಯಮಗಳ ಬಗ್ಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಈಗಾಗಲೇ ಜಾಗೃತಿ ಮೂಡಿಸಿದ್ದಾರೆ. ಮೈಕ್ರೋ ಫೈನಾನ್ಸ್‌ ಕಂಪನಿಗಳ ಸಭೆ ನಡೆಸಿ ನಿಯಮ ತಿಳಿ ಹೇಳಿದ್ದಾರೆ.

ಅನಧಿಕೃತ ಲೇವಾದೇವಿದಾರರು ಜನರ ತುರ್ತು ಅವಶ್ಯಕತೆಗೆ ಹಣ ನೀಡಿ, ಹೆಚ್ಚು ಬಡ್ಡಿ ವಿಧಿಸಿ ಶೋಷಣೆ ಮಾಡುವವರ ವಿರುದ್ಧ, ಸೂಕ್ಷ್ಮ ಹಣಕಾಸು ಸಂಸ್ಥೆ, ಮನಿ ಲೆಂಡಿಂಗ್‌ ಸಂಸ್ಥೆಗಳ ನಿಯಮ ಉಲ್ಲಂಘನೆಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‌ ಸಹಾಯವಾಣಿ ಸಂಖ್ಯೆ 14448ಕ್ಕೆ ಮಾಹಿತಿ ನೀಡಬಹುದು. ಅಂತೆಯೇ ರಾಜ್ಯದ ಏಕೀಕೃತ ಸಹಾಯವಾಣಿ ಸಂಖ್ಯೆ 112 ಅಥವಾ 1902ಕ್ಕೆ ಸಂಪರ್ಕಿಸಬಹುದು.

ಬಡವರ ಅವಶ್ಯಕತೆಯನ್ನೇ ಕೆಲವು ಮೈಕ್ರೋ ಫೈನಾನ್ಸ್‌ ಕಂಪನಿಯವರು ಬಂಡವಾಳ ಮಾಡಿಕೊಂಡಿದ್ದಾರೆ. ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ ಕೈ ಸಾಲ ಪಡೆಯುತ್ತಾರೆ. ಆದರೆ ಸಾಲ ಮರುಪಾವತಿ ಕಷ್ಟವಾದಾಗ, ಬಡ್ಡಿ ಕಟ್ಟಿ ಹೈರಾಣಾಗಿರುತ್ತಾರೆ. ಮರು ವಸೂಲಿಗೆ ಸಾಲ ನೀಡಿದವರು ಇನ್ನಿಲ್ಲದ ಕಾಟ ಕೊಡುತ್ತಾರೆ. ಇದನ್ನು ತಡೆಯಲೆಂದೇ ಸರಕಾರ ಸಾಲ ನೀಡಿಕೆಗೂ ಮಾನದಂಡ ವಿಧಿಸಿದೆ.

3 ಲಕ್ಷ ರೂ.ಗಳವರೆಗೂ ಆದಾಯವಿರುವ ಸಾರ್ವಜನಿಕರಿಗೆ ಸಾಲವನ್ನು ಒದಗಿಸುವ ವ್ಯವಸ್ಥೆಯನ್ನು ಮೈಕ್ರೋ ಫೈನಾನ್ಸ್‌ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಕೇವಲ 31 ಮೈಕ್ರೋ ಫೈನಾನ್ಸ್‌ ಇಂಡಸ್ಟ್ರೀಸ್‌ಗಳು ಅಸ್ತಿತ್ವದಲ್ಲಿದ್ದು, ಈ ಸಂಸ್ಥೆಗಳು ಅಸೋಸಿಯೇಷನ್‌ ಆಫ್‌ ಕರ್ನಾಟಕ ಮೈಕ್ರೋ ಫೈನಾನ್ಸ್‌ ಇನಸ್ಟಿಟ್ಯೂಷನ್‌ ಸದಸ್ಯತ್ವ ಪಡೆದಿವೆ. ರಾಜ್ಯದಲ್ಲಿ ಈ ಸಂಸ್ಥೆಗಳ 3090 ಶಾಖೆಗಳಿದ್ದು, 37,967 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 1,09,88,332 ಖಾತೆಗಳಲ್ಲಿ 59,367.76 ಕೋಟಿ ರೂ. ಬಾಕಿ ಉಳಿದಿದೆ.

ಕರ್ನಾಟಕ ಲೇವಾದೇವಿದಾರರ ಅಧಿನಿಯಮ-1961ರಡಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಈ ಅಧಿನಿಯಮದ ಅಡಿ 2024ರ ಡಿಸೆಂಬರ್‌ 31ರ ವರೆಗೆ 20,425 ಸಂಸ್ಥೆಗಳು ನೋಂದಣಿಯಾಗಿವೆ. ಅದರಲ್ಲಿ 6,590 ಲೇವಾದೇವಿದಾರರು, 6772 ಪಾನ್‌ ಬ್ರೋಕರ್‌ಗಳು, 7063 ಹಣಕಾಸಿನ ಸಂಸ್ಥೆಗಳಿದ್ದು, ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯಿದೆ- 2004 ಪ್ರಕಾರ ಬಡ್ಡಿಗೆ ಮಿತಿ ಹೇರಲಾಗಿದೆ.

ಮೈಕ್ರೊ ಫೈನಾನ್ಸ್‌ಗಳಿಂದ ಸಾಲಕ್ಕೆ ಹೆಚ್ಚು ಬಡ್ಡಿ ದರ ನಿಗದಿ, ವಸೂಲಿ ವೇಳೆ ತೋರುವ ಕ್ರೌರ್ಯಕ್ಕೆ ಮುಕ್ತಿ ಹಾಡಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮುಂದಾಗಿದೆ. ಬಡ್ಡಿ ದರ, ವಿಮಾ ಶುಲ್ಕ, ಸಂಸ್ಕರಣಾ ಶುಲ್ಕ ಸೇರಿದಂತೆ ಸಾಲದಾರರಿಗೆ ವಿಧಿಸುವ ಎಲ್ಲ ವೆಚ್ಚಗಳ ವಿವರಗಳನ್ನು ತನಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ. ಮೈಕ್ರೊ ಫೈನಾನ್ಸ್‌ಗಳ ಕಿರುಕುಳದಿಂದ ಬೇಸತ್ತು ಗ್ರಾಹಕರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ತಡೆಯಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ. ‘ಎನ್‌ಬಿಎಫ್‌ಸಿಗಳು ವಿವಿಧ ಬಗೆಯ ಸಾಲಗಳಿಗೆ ವಿಧಿಧಿಸುವ ಶುಲ್ಕದ ವಿವರಗಳನ್ನು ಆರ್‌ಬಿಐಗೆ ಸ್ಪಷ್ಟವಾಗಿ ತಿಳಿಸಬೇಕು. ಈ ಬಹಿರಂಗ ಪಡಿಸಿದ ಬಡ್ಡಿ ದರಗಳಿಗೆ ಬದ್ಧರಾಗಿರಬೇಕಾಗುತ್ತದೆ. ಅದನ್ನು ಮೀರಲಾಗುವುದಿಲ್ಲ. ಒಂದು ವೇಳೆ ಬಡ್ಡಿ ದರ ಏರಿಸಬೇಕು ಎಂದರೆ ಎನ್‌ಬಿಎಫ್‌ಸಿಯು ಆಡಳಿತ ಮಂಡಳಿ ಅನುಮೋದನೆ ಪಡೆಯಬೇಕಾಗುತ್ತದೆ,’ ಎಂದು ಆರ್‌ಬಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button