ಭಗವಂತ ಕೆಳಗಿಳಿದು ಬಂದರೂ 2- 3 ವರ್ಷಗಳಲ್ಲಿ ಬೆಂಗಳೂರನ್ನು ಬದಲಾಯಿಸಲು ಅಸಾಧ್ಯ

ಭಗವಂತ ಕೆಳಗಿಳಿದು ಬಂದರೂ 2- 3 ವರ್ಷಗಳಲ್ಲಿ ಬೆಂಗಳೂರನ್ನು ಬದಲಾಯಿಸಲು ಅಸಾಧ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಡಿಕೆಶಿ ಈ ಮಾತಿನ ಮರ್ಮವೇನು ಎಂಬ ನಿಟ್ಟಿನಲ್ಲೂ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಆಗಿರುವ ಡಿಕೆಶಿಯೇ ಈ ರೀತಿ ಹೇಳಿಕೆ ನೀಡಿದರೆ ಇದು ಉಂಟು ಮಾಡುವ ಪರಿಣಾಮ ಏನು ಎಂಬ ಪ್ರಶ್ನೆಯೂ ಇದೀಗ ಕೇಳಲ್ಪಡುತ್ತಿದೆ.
ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ “ನಮ್ಮ ರಸ್ತೆ – ವಿನ್ಯಾಸ ಕಾರ್ಯಾಗಾರ” ಉದ್ಘಾಟನೆ ಮತ್ತು ಸಂಚಾರ ಪ್ರಯೋಗಾಲಯಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ್ದ ಡಿಕೆ ಶಿವಕುಮಾರ್, “ಕೇವಲ ಎರಡು- ಮೂರು ವರ್ಷಗಳಲ್ಲಿ ಬೆಂಗಳೂರನ್ನು ಬದಲಾಯಿಸಲು ಆಗುವುದಿಲ್ಲ. ಮೇಲಿರುವ ಭಗವಂತ ಕೆಳಗೆ ಬಂದರೂ ಸಾಧ್ಯವಿಲ್ಲದ ಕೆಲಸ. ಆದರೆ ನಾವು ಯೋಜನೆಗಳ ರೂಪುರೇಷೆಗಳನ್ನು ಸರಿಯಾಗಿ ಮಾಡಿ, ಅನುಷ್ಠಾನಕ್ಕೆ ತಂದರೆ ಮಾತ್ರ ಇದು ಸಾಧ್ಯವಾಗುತ್ತದೆ. ರಕ್ಷಣೆ, ಗುಣಮಟ್ಟ ಮತ್ತು ಏಕರೂಪತೆ ಕಾಪಾಡುವುದು ನಮ್ಮ ಗುರಿ” ಎಂದಿದ್ದರು.“ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯಾಗಿ ನಾವುಗಳು ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕು. ಇಲ್ಲದಿದ್ದರೇ ಬೆಂಗಳೂರಿಗೆ ನಾವುಗಳು ಮೋಸ ಮಾಡಿದಂತೆ” ಎಂದೂ ಅವರು ಅಭಿಪ್ರಾಯಪಟ್ಟಿದ್ದರು.ಬೆಂಗಳೂರು ನಗರವನ್ನು ಉನ್ನತ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಬ್ರ್ಯಾಂಡ್ ಬೆಂಗಳೂರು ಚಿಂತನೆಯನ್ನು ಡಿಕೆಶಿ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹ ಮಾಡುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ತಮ್ಮ ಕನಸಿನ ಬ್ರ್ಯಾಂಡ್ ಬೆಂಗಳೂರು ಪ್ರಚಾರಕ್ಕೂ ಹೆಚ್ಚಿನ ಆದ್ಯತೆಯನ್ನು ಅವರು ನೀಡುತ್ತಿದ್ದಾರೆ. ಆದರೆ ಇದೀಗ ಡಿಕೆ ಶಿವಕುಮಾರ್ ನೀಡಿದ ಇಂತಹ ಹೇಳಿಕೆಗಳು ಬ್ರ್ಯಾಂಡ್ ಬೆಂಗಳೂರು ಉದ್ದೇಶದ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವಂತಾಗಿದೆ.ಬೆಂಗಳೂರಿನಲ್ಲಿ ಸುರಂಗರಸ್ತೆಯ ನಿರ್ಮಾಣಕ್ಕೆ ಹಲವಾರು ಸವಾಲುಗಳಿವೆ. ಇನ್ನೂ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ ಎಂದು ಡಿಕೆ ಶಿವಕುಮಾರ್ ಈಗಾಗಲೇ ಹೇಳಿದ್ದಾರೆ. ಭೂಮಿಯ ಸ್ವಾಧೀನ, ಹಣಕಾಸು, ತಾಂತ್ರಿಕ ಅಂಶಗಳೂ ಇದಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಬೆಂಗಳೂರಿನಲ್ಲಿ ಸುಮಾರು 1,700 ಕಿಮೀ ವಿಸ್ತೀರ್ಣಕ್ಕೆ ವೈಟ್ ಟಾಪಿಂಗ್ ಹಾಕಲಾಗುತ್ತಿದೆ. ಮುಂದಿನ 30 ವರ್ಷ ಇದು ಬಾಳಿಕೆ ಬರುತ್ತದೆ. ರಾಜಕಾಲುವೆ ಪಕ್ಕದಲ್ಲಿ ಹೊಸ ರಸ್ತೆಗಳ ನಿರ್ಮಾಣ. ಮೇಲ್ಸೇತುವೆ ಸೇರಿದಂತೆ ಅನೇಕ ನೂತನ ಯೋಜನೆಗಳು ಸರ್ಕಾರದ ಮುಂದಿವೆ ಎಂದು ಡಿಕೆಶಿ ಹೇಳುತ್ತಿದ್ದರೂ, ಶೀಘ್ರದಲ್ಲೇ ಇದೆಲ್ಲವೂ ಸಾಧ್ಯವಿಲ್ಲ ಎಂಬುವುದು ಅವರ ಮಾತಿನಿಂದ ಸ್ಪಷ್ಟಗೊಳ್ಳುತ್ತಿದೆ.ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವುದೇ ಸವಾಲಾಗಿದೆ. ನಗರದ ಹಲವು ರಸ್ತೆಗಳಲ್ಲಿ ಗುಂಡಿಗಳಿಂದ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಕೆಶಿ ಹೇಳಿದರೂ ಪರಿಹಾರ ಮಾತ್ರ ಗೋಚರಿಸುತ್ತಿಲ್ಲ ಎಂಬುವುದು ವಾಸ್ತವ.ಕೋವಿಡ್ 19 ಬಳಿಕ ಬೆಂಗಳೂರಿನಲ್ಲಿ ಜನಸಂಖ್ಯೆ ಕಡಿಮೆ ಅಗಬಹುದು ಎಂಬ ಲೆಕ್ಕಾಚಾರ ಇತ್ತು. ಆದರೆ ಅದಕ್ಕೆ ಭಿನ್ನವಾದ ವಾತಾವರಣ ಇದೆ. ನಗರದಲ್ಲಿ ಜನಸಂಖ್ಯೆ, ವಾಹನಗಳ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ಭವಿಷ್ಯದಲ್ಲಿ ನಿಭಾಯಿಸುವುದೇ ಬಹುದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಶೀಘ್ರ ಪರಿಹಾರ ಕಂಡುಕೊಳ್ಳುವಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು ಚಿಂತನೆ ನಡೆಸಬೇಕೇ ಹೊರತು ದೇವರು ಕೆಳಗಿಳಿದು ಬಂದರೂ ಸಮಸ್ಯೆಗೆ ಮುಕ್ತಿ ಶೀಘ್ರದಲ್ಲಿ ಸಿಗುವುದಿಲ್ಲ ಎಂದರೆ ಅದು ಕೊಡುವ ಸಂದೇಶ ಏನು ಎಂಬುವುದು ಮುಖ್ಯವಾಗುತ್ತದೆ.ಬದಲಾವಣೆ ರಾತ್ರೋ ರಾತ್ರಿ ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಡಿಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದರೂ, ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವ ಜನರಿಗೆ ಇದರಿಂದ ಬೇಸರ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಬೆಳೆಯುತ್ತಿರುವ ನಗರ ಬೆಂಗಳೂರಿನ ಮತ್ತಷ್ಟು ಅಭಿವೃದ್ದಿಗೆ ಡಿಕೆಶಿ ಹೆಚ್ಚಿನ ಆದ್ಯತೆ ನೀಡುತ್ತಾರಾ? ಕಾದು ನೋಡಬೇಕಾಗಿದೆ.