ಬಾಲವನ ಪ್ರಶಸ್ತಿಗೆ ಕೆ.ಪಿ.ರಾವ್ ಆಯ್ಕೆ
ಪುತ್ತೂರು: ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಕಂಪ್ಯೂಟರ್ ವಿಜ್ಞಾನಿ ಕಿನ್ನಿಕಂಬಳ ಪದ್ಮನಾಭ ರಾವ್ (ಕೆ.ಪಿ. ರಾವ್) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹25 ಸಾವಿರ ನಗದು, ಸ್ಮರಣಿಕೆ ಮತ್ತು ಸನ್ಮಾನ ಪತ್ರ ಒಳಗೊಂಡಿದೆ.
ಡಾ. ಶಿವರಾಮ ಕಾರಂತರ ಜನ್ಮದಿನವಾದ ಅ.10ರಂದು, ಪುತ್ತೂರಿನ ಕಾರಂತ ಬಾಲವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂಪ್ಯೂಟರ್, ಟ್ಯಾಬ್ಲೆಟ್, ಮೊಬೈಲ್ಗಳಲ್ಲಿ ಬಳಸುವ ಕನ್ನಡ ಕೀಲಿಮಣೆಯು ಕೆ.ಪಿ. ರಾವ್ ಅವರು ಅಭಿವೃದ್ಧಿಪಡಿಸಿದ ವಿನ್ಯಾಸವನ್ನು ಅವಲಂಬಿಸಿದೆ. ತಮ್ಮ ಸಂಶೋಧನೆಗಾಗಿ ಪೇಟೆಂಟ್ ಕೂಡ ಪಡೆಯದೆ ಅದನ್ನು ಕನ್ನಡಕ್ಕಾಗಿ ಸಮರ್ಪಿಸಿದ ಕೆ.ಪಿ. ರಾವ್ ಅವರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಲ್ಲುತ್ತದೆ’ ಎಂದರು.
‘ಅ.10ರಂದು ನಡೆಯುವ ಕಾರ್ಯಕ್ರಮದಲ್ಲಿ ‘ಬಾಲವದಲ್ಲಿ ಭಾರ್ಗವ’ ಕೃತಿ ಬಿಡುಗಡೆಗೊಳ್ಳಲಿದೆ. ಪುತ್ತೂರಿನ ಪತ್ರಕರ್ತ ಬಿ.ಟಿ. ರಂಜನ್ ಅವರಿಗೆ ಪತ್ರಿಕೋದ್ಯಮ ಜೀವಮಾನದ ಸಾಧನೆಗಾಗಿ ವಿಶೇಷ ಪ್ರಶಸ್ತಿ ನೀಡಲಾಗುವುದು’ ಎಂದರು.
ಶಿವರಾಮ ಕಾರಂತರ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಂದರ್ ಕೇನಾಜೆ ಇದ್ದರು.