
ಢಾಕಾ: ಬಾಂಗ್ಲಾದೇಶದಲ್ಲಿ ದೊಡ್ಡ ರಾಜಕೀಯ ಏರಿಳಿತ ಸಂಭವಿಸುವ ಸಾಧ್ಯತೆ ಇದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್(Muhammad Yunus )ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಕೆಲವು ತಿಂಗಳ ಹಿಂದೆ ಮೊಹಮ್ಮದ್ ಯೂನಸ್ ರಾಷ್ಟ್ರೀಯ ನಾಗರಿಕ ಪಕ್ಷದ (ಎನ್ಸಿಪಿ) ಸಂಚಾಲಕ,ಸ್ನೇಹಿತ ನಹಿದ್ ಇಸ್ಲಾಂ ಅವರನ್ನು ಭೇಟಿಯಾದ ನಂತರ ಈ ಊಹಾಪೋಹಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಆದರೆ ಬಾಂಗ್ಲಾದೇಶವು ಅಂತಹ ವರದಿಗಳ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೊಹಮ್ಮದ್ ಯೂನಸ್ ಮತ್ತು ಬಾಂಗ್ಲಾದೇಶ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ನಡುವಿನ ಸಂಬಂಧಗಳು ಉತ್ತಮವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಜನರಲ್ ಜಮಾನ್ ಇತ್ತೀಚೆಗೆ ಯೂನಸ್ ಸರ್ಕಾರವನ್ನು ಸಾರ್ವಜನಿಕವಾಗಿ ಖಂಡಿಸಿದ್ದರು.
ರಾಷ್ಟ್ರೀಯ ನಾಗರಿಕ ಪಕ್ಷದ (ಎನ್ಸಿಪಿ) ಸಂಚಾಲಕ ನಹಿದ್ ಇಸ್ಲಾಂ ಮೊಹಮ್ಮದ್ ಯೂನಸ್ ಅವರನ್ನು ಭೇಟಿ ಮಾಡಿದ್ದಾರೆ. ಯೂನಸ್ ರಾಜೀನಾಮೆ ನೀಡಲು ಯೋಜಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮುಖ್ಯ ಸಲಹೆಗಾರರ ಅಧಿಕೃತ ನಿವಾಸವಾದ ಜಮುನಾದಲ್ಲಿ ಗುರುವಾರ ಸಂಜೆ ಈ ಸಭೆ ನಡೆದಿದ್ದು, ಅಲ್ಲಿ ಅವರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
ನಹಿದ್ ಇಸ್ಲಾಂ ಸಂಜೆ 7 ಗಂಟೆ ಸುಮಾರಿಗೆ ಜಮುನಾಗೆ ಆಗಮಿಸಿ ಯೂನಸ್ ಅವರೊಂದಿಗೆ ಖಾಸಗಿ ಮಾತುಕತೆ ನಡೆಸಿದರು, ಮುಖ್ಯವಾಗಿ ಯೂನಸ್ ಅವರ ಮುಖ್ಯ ಸಲಹೆಗಾರ ಸ್ಥಾನದ ಬಗ್ಗೆ ಚರ್ಚಿಸಿದರು. ನಹಿದ್ ಇಸ್ಲಾಂ ಅವರನ್ನು ಸಂಪರ್ಕಿಸಿದಾಗ ಅವರು ಭೇಟಿಯನ್ನು ದೃಢಪಡಿಸಿದರು ಆದರೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಂತರ ಸಂಜೆ, ಸಲಹೆಗಾರರಾದ ಮಹ್ಫುಜ್ ಆಲಂ ಮತ್ತು ಆಸಿಫ್ ಮಹ್ಮೂದ್ ಶೋಜಿಬ್ ಭೂಯಾನ್ ಕೂಡ ಯೂನಸ್ರನ್ನು ಭೇಟಿಯಾಗಿದ್ದಾರೆ.
ಬಾಂಗ್ಲಾದೇಶದ ಮ್ಯಾನ್ಮಾರ್ ಗಡಿಯಲ್ಲಿ ಮಾನವೀಯ ಕಾರಿಡಾರ್ ನಿರ್ಮಿಸುವ ಯೋಜನೆಯ ಬಗ್ಗೆ ಸೇನೆ ಮತ್ತು ಸರ್ಕಾರ ಮುಖಾಮುಖಿಯಾಗಿವೆ. ವರದಿಯ ಪ್ರಕಾರ, ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರವು ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿಯಲ್ಲಿ ಮಾನವೀಯ ಕಾರಿಡಾರ್ ನಿರ್ಮಿಸಲು ಅಮೆರಿಕದೊಂದಿಗೆ ರಹಸ್ಯವಾಗಿ ಒಪ್ಪಂದ ಮಾಡಿಕೊಂಡಿತ್ತು.ಈ ವಿಷಯ ಸೇನೆಗೆ ತಿಳಿದಾಗ, ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಬಾಂಗ್ಲಾದೇಶದ ಸೇನಾ ಮುಖ್ಯಸ್ಥರೇ ಈ ಒಪ್ಪಂದವನ್ನು ಖಂಡಿಸಿದರು. ಇದರ ನಂತರ, ಯೂನಸ್ ಸರ್ಕಾರವು ಯೂ-ಟರ್ನ್ ತೆಗೆದುಕೊಂಡು ಮ್ಯಾನ್ಮಾರ್ ಗಡಿಯಲ್ಲಿ ಮಾನವೀಯ ಕಾರಿಡಾರ್ಗೆ ಸಂಬಂಧಿಸಿದಂತೆ ಯಾವುದೇ ದೇಶದೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಹೇಳಿದೆ.ಮತ್ತೊಂದೆಡೆ ಮೊಹಮ್ಮದ್ ಯೂನಸ್ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್ಪಿ) ಗುರುವಾರ ಪ್ರತಿಭಟನೆ ನಡೆಸಿದ ನಂತರ ಮೊಹಮ್ಮದ್ ಯೂನಸ್ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಇದಕ್ಕೂ ಒಂದು ದಿನ ಮೊದಲು, ಬಾಂಗ್ಲಾದೇಶ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್ ಅವರು ಮೊಹಮ್ಮದ್ ಯೂನಸ್ಗೆ ಕಠಿಣ ಎಚ್ಚರಿಕೆ ನೀಡಿದ್ದರು ಮತ್ತು ಡಿಸೆಂಬರ್ ವೇಳೆಗೆ ಚುನಾವಣೆಗಳನ್ನು ನಡೆಸುವಂತೆ ಹೇಳಿದ್ದರು.