
ಬೆಂಗಳೂರು: ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಹಾಗೂ ಕೇರಳ ಸರ್ಕಾರದ ಲಾಬಿಗೆ ಮಣಿದು ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಈ ಕುರಿತು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಲಹರ್ ಸಿಂಗ್, ಎಷ್ಟೇ ರಾಜಕೀಯ ಒತ್ತಡಗಳು ಬಂದರೂ ಕೂಡ ಕರ್ನಾಟಕ ಸರ್ಕಾರ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಎತ್ತಿಹಿಡಿಯಬೇಕು. ಬಂಡೀಪುರವನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಕರ್ನಾಟಕದ ಬಂಡೀಪುರ ಅಭಯಾರಣ್ಯವು ಜೀವವೈವಿಧ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಕೇಂದ್ರವಾಗಿದೆ. ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ ಅಧ್ಯಯನ ವರದಿ ಪ್ರಕಾರ, 2005 ಮತ್ತು 2007ರ ನಡುವೆ, ಈ ಪ್ರದೇಶದಲ್ಲಿ ವಾಹನ ಅಪಘಾತದಿಂದ 286 ವನ್ಯಜೀವಿಗಳು ಮೃತಪಟ್ಟಿವೆ. 2009ರಲ್ಲಿ ಕರ್ನಾಟಕ ಸರ್ಕಾರ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು ಅದು ಈಗಲೂ ಮುಂದುವರೆದಿದೆ. ಈ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ ಎಂದರು.
2010 ಮತ್ತು 2018 ರ ನಡುವೆ, ವನ್ಯಜೀವಿಗಳ ಸಾವಿನ ಸಂಖ್ಯೆ 34 ಕ್ಕೆ ಇಳಿದಿತ್ತು. ಅಭಯಾರಣ್ಯದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದಿಂದ ವನ್ಯಜೀವಿಗಳಿಗೆ ಹಾನಿಯಾಗುವುದು ತಪ್ಪಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಕೇರಳವು ನಿಷೇಧವನ್ನು ತೆಗೆದುಹಾಕುವಂತೆ ಅರ್ಜಿ ಸಲ್ಲಿಸಿದ ನಂತರ 2019ರಲ್ಲಿ ಸುಪ್ರೀಂ ಕೋರ್ಟ್ ನಿಷೇಧವನ್ನು ಎತ್ತಿ ಹಿಡಿಯಿತು. ಅನೇಕ ಬಾರಿ ನಡೆದಿರುವ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ಚರ್ಚೆ, ಉನ್ನತ ಮಟ್ಟದ ಸಮಿತಿಗಳ ಚರ್ಚೆ ಮತ್ತು ಸಭೆಗಳಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಕೂಡ ಈ ನಿರ್ಬಂಧವನ್ನು ಬೆಂಬಲಿಸಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಸೇರಿದಂತೆ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳ ಹಿಂದಿನ ಸರ್ಕಾರಗಳು ರಾತ್ರಿ ವಾಹನ ಸಂಚಾರ ನಿಷೇಧವನ್ನು ಬೆಂಬಲಿಸಿವೆ ಎಂದು ಹೇಳಿದರು.
ಆದರೆ ದುರದೃಷ್ಟವಶಾತ್, ಇತ್ತೀಚಿಗೆ ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆಗೆದುಹಾಕುವ ಪ್ರಯತ್ನ ಆರಂಭವಾಗಿದೆ. ನವೆಂಬರ್ 2024ರಲ್ಲಿ, ನಿರ್ಬಂಧಗಳನ್ನು ಸಡಿಲಗೊಳಿಸುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು ಆತಂಕ ಉಂಟುಮಾಡಿತ್ತು. ನಿಷೇಧವನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತ್ರದಿಂದ ಈ ಬೇಡಿಕೆಗೆ ಉತ್ತೇಜನ ದೊರೆಯಿತು. ನಂತರ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾದ ಅಫಿಡವಿಟ್ ಹಿಂತೆಗೆದುಕೊಂಡಿತು. ಈ ಕ್ರಮಗಳು ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ನಿಷೇಧವನ್ನು ತೆಗೆದುಹಾಕಲು ರಾಜಕೀಯ ಒತ್ತಡಕ್ಕೆ ಮಣಿಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳಿಂದ ಇದು ಸ್ಪಷ್ಟವಾಗಿದೆ ಎಂದಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಇತ್ತೀಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ನಿಷೇಧ ಸಡಿಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬಂಡೀಪುರದ ಗಡಿ ಪ್ರದೇಶದಿಂದ ಸ್ವಲ್ಪ ದೂರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರವಿದೆ. ಅವರು ತಮ್ಮ ಸರ್ಕಾರದ ನಿಲುವಿನ ಬಗ್ಗೆ ಇಲ್ಲಿವರೆಗೂ ಮೌನವಾಗಿದ್ದು, ಸಂರಕ್ಷಣೆಗೆ ಆದ್ಯತೆ ನೀಡುವ ಬದಲು, ಕಾಂಗ್ರೆಸ್ ಸರ್ಕಾರ ಒಂದು ಕುಟುಂಬವನ್ನು ಸಂತೋಷಪಡಿಸುವ ಕಡೆಗೆ ಗಮನಹರಿಸುತ್ತಿರುವುದು ದುರ್ದೈವ ಎಂದು ಹೇಳಿದರು.