ಫೆ. 13- 14 ರಂದು ಯಲಹಂಕ ಭಾಗದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆ. 11 ರಿಂದ 14 ರವರೆಗೆ ಆಯೋಜನೆಯಾಗಿರುವ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನಕ್ಕೆ ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು. ಬಳಿಕ ಭಾರತೀಯ ವಾಯುಪಡೆಯ ಪ್ರಖ್ಯಾತ ಸೂರ್ಯ ಕಿರಣ್ ತಂಡ ಬಾನಂಗಳದಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಏರ್ ಶೋ ಪ್ರಾರಂಭಿಸಿತು.
ಫೆಬ್ರವರಿ 13 ಹಾಗೂ 14 ರಂದು ಏಷ್ಯಾದ ಅತಿದೊಡ್ಡ ಏರ್ ಶೋ ನಡೆಯಲಿದೆ. ಈ ಏರ್ ಶೋ ವೀಕ್ಷಿಸಲು ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಗಣ್ಯರು ಆಗಮಿಸುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಯಲಹಂಕ ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ಫೆ. 13 – 14 ರಂದು ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಕಾಲೇಜುಗಳಿಗೆ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಆದರೆ ಯಾವ ಶಾಲೆ, ಕಾಲೇಜುಗಳು ಎಂದು ನಿರ್ದಿಷ್ಟವಾಗಿ ಪಟ್ಟಿ ಮಾಡಿಲ್ಲ.ಯಲಹಂಕದ ವಾಯುನೆಲೆಯಲ್ಲಿ ಫೆ. 10 ರಿಂದ 14 ರವರೆಗೆ ಏರೋ ಇಂಡಿಯಾ-2025 ನಡೆಯಲಿರುವ ಹಿನ್ನೆಲೆಯಲ್ಲಿ ಮುಂದಿನ 11 ದಿನಗಳವರೆಗೆ ಯಲಹಂಕ ಬಳಿ ನಮ್ಮ ಮೆಟ್ರೊ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.ಪಾರ್ಕಿಂಗ್ಗಾಗಿ ಸ್ಥಳಾವಕಾಶದ ಅಗತ್ಯವಿರುವುದರಿಂದ ಫೆ.5 ರಿಂದ 15 ರವರೆಗೆ ಕಾಮಗಾರಿ ನಿಲ್ಲಿಸುವಂತೆ ಐಎಎಫ್ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾಯಂತ್ರೋಪಕರಣಗಳನ್ನು ಸ್ಥಳಾಂತರಿಸಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಫೆ.16 ರಿಂದ ಕೆಲಸ ಪುನರಾರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೆ.ಆರ್.ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 37 ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು 17 ಮೆಟ್ರೊ ನಿಲ್ದಾಣಗಳು ಬರಲಿದ್ದು, ಮೂರು ಹಂತದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಮೂರನೇ ಹಂತದ ಕಾಮಗಾರಿಯು ಯಲಹಂಕದಿಂದ ಟರ್ಮಿನಲ್-2 (15.01 ಕಿ.ಮೀ.)ನಲ್ಲಿ ನಡೆಯಲಿದೆ. ಈ ಕಾಮಗಾರಿ ಐಎಎಫ್ ಕ್ಯಾಂಪಸ್ನಿಂದ ಪ್ರಾರಂಭವಾಗುತ್ತದೆ. ಹೀಗಾಗಿ, 1 ಕಿ.ಮೀ.ವರೆಗೆ ಕೆಲಸ ಸ್ಥಗಿತಗೊಂಡಿದೆ.