ದೇಶ
Trending

ಪಾಕ್‌ ಆರ್ಥಿಕತೆ ಮೇಲೆ ಸರ್ಜಿಕಲ್‌ ಸ್ಟ್ರೈಕ್‌

ಹೊಸದಿಲ್ಲಿ: ಉಗ್ರ ಪೋಷಕ ಪಾಕಿಸ್ತಾನಕ್ಕೆ ಜಾಗತಿಕ ಹಣಕಾಸು ಸಂಸ್ಥೆಗಳಿಂದ ನೆರವು ಸಿಗುವುದನ್ನು ತಡೆಯಲು ಭಾರತ ರಾಜತಾಂತ್ರಿಕ ಕ್ರಮಕ್ಕೆ ಮುಂದಾಗಿದೆ. ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕ ಕೃತ್ಯಗಳ ವಿಚಾರ ಮುಂದಿಟ್ಟುಕೊಂಡು ಆರ್ಥಿಕ ನೆರವು ನೀಡದಂತೆ ಜಾಗತಿಕ ಸಂಸ್ಥೆಗಳ ಮೇಲೆ ಒತ್ತಡ ಹಾಕಲು ಭಾರತ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ಹೇಳಿವೆ.ವಿಶ್ವ ಬ್ಯಾಂಕ್‌ ಹಾಗೂ ಹಣಕಾಸು ಕ್ರಿಯಾಪಡೆ (ಎಫ್‌ಎಟಿಎಫ್‌) ಮುಂದೆ ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಮಾಡಲು ಸರಕಾರ ತೀರ್ಮಾನಿಸಿದೆ. ಭಾರತ-ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ಸಂದರ್ಭದಲ್ಲಿ‌ ಭಾರತದ ತೀವ್ರ ವಿರೋಧದ ನಡುವೆಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಪಾಕಿಸ್ತಾನಕ್ಕೆ ಶತಕೋಟಿ ಡಾಲರ್‌ ಸಾಲ ಮಂಜೂರು ಮಾಡಿತ್ತು.

ಈಗ ವಿಶ್ವಬ್ಯಾಂಕ್‌ ಜೂನ್‌ನಲ್ಲಿ ಪಾಕಿಸ್ತಾನಕ್ಕೆ 20 ಶತಕೋಟಿ ಡಾಲರ್‌ (ಸುಮಾರು 1.70 ಲಕ್ಷ ಕೋಟಿ ರೂ.ಗೂ ಹೆಚ್ಚು) ಸಾಲ ನೀಡಲು ಮುಂದಾಗಿದ್ದು, ಈ ಪ್ರಸ್ತಾವಕ್ಕೆ ತಡೆಯೊಡ್ಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿಸರ್ವ ಪ್ರಯತ್ನ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಪಾಕ್‌ ಸರಕಾರದ 28 ಕಾರ‍್ಯಕ್ರಮಗಳಿಗೆ ಬೆಂಬಲವಾಗಿ ಐಎಂಎಫ್‌ ಸಾಲ ನೀಡಿದೆ. ಆದರೆ, ಇದರಲ್ಲಿ ಬಹುತೇಕ ಅನುದಾನವನ್ನು ಸರಕಾರವು ದೇಶದ ಅರ್ಥವ್ಯವಸ್ಥೆಯ ಸುಧಾರಣೆಗೆ ಬಳಸದೇ ಶಸ್ತ್ರಾಸ್ತ್ರಗಳ ಹಾಗೂ ಮದ್ದುಗುಂಡುಗಳ ಖರೀದಿಗೆ ಹೆಚ್ಚಿನ ಅನುದಾನವನ್ನು ಬಳಸಿದೆ ಎಂದು ಭಾರತವು ವಾದಿಸಿದೆ.ಭಾರತವು ಐಎಂಎಫ್‌ ಸಾಲದ ವಿಚಾರವನ್ನು ಜರ್ಮನಿ, ಇಟಲಿ, ಫ್ರಾನ್ಸ್‌ನ ವಿತ್ತ ಸಚಿವರ ಮುಂದೆಯೂ ಗಮನಕ್ಕೆ ತಂದಿದೆ. ಕೆಲವು ದಿನಗಳ ಹಿಂದಷ್ಟೇ ಐಎಂಎಫ್‌, ಸಾಲದ ಹೊಸ ಕಂತಿನ ಬಿಡುಗಡೆಗೆ ಪಾಕಿಸ್ತಾನಕ್ಕೆ 11 ಹೊಸ ಷರತ್ತುಗಳನ್ನು ವಿಧಿಸಿತ್ತು.

ಹೊಸ ರೂ 17.6 ಟ್ರಿಲಿಯನ್ ಬಜೆಟ್‌ಗೆ ಸಂಸತ್ತಿನ ಅನುಮೋದನೆ ಪಡೆಯಬೇಕು. ಇದರ ಜೊತೆಗೆ, ವಿದ್ಯುತ್ ಬಿಲ್‌ಗಳ ಮೇಲಿನ ಸಾಲ ಮರುಪಾವತಿ ಶುಲ್ಕವನ್ನು ಹೆಚ್ಚಿಸಬೇಕು. ಮೂರು ವರ್ಷಕ್ಕಿಂತ ಹಳೆಯದಾದ ಉಪಯೋಗಿಸಿದ ಕಾರುಗಳ ಆಮದಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು.ಭಾರತದೊಂದಿಗೆ ಉದ್ವಿಗ್ನತೆ ಹೆಚ್ಚಾದರೆ ಆರ್ಥಿಕ ಯೋಜನೆಗಳಿಗೆ ತೊಂದರೆಯಾಗಬಹುದು. ವಿಶೇಷ ತಂತ್ರಜ್ಞಾನ ವಲಯಗಳು ಮತ್ತು ಇತರ ಕೈಗಾರಿಕಾ ಪಾರ್ಕ್‌ಗಳಿಗೆ ಸಂಬಂಧಿಸಿದ ಎಲ್ಲಾ ಪ್ರೋತ್ಸಾಹಗಳನ್ನು 2035 ರ ವೇಳೆಗೆ ಸಂಪೂರ್ಣವಾಗಿ ತೆಗೆದುಹಾಕಲು ಸರ್ಕಾರವು ಯೋಜನೆಯನ್ನು ಸಿದ್ಧಪಡಿಸಬೇಕು.ನಾಲ್ಕು ಪ್ರಾಂತ್ಯಗಳು ಹೊಸ ಕೃಷಿ ಆದಾಯ ತೆರಿಗೆ ಕಾನೂನುಗಳನ್ನು ಜಾರಿಗೆ ತರಬೇಕು. ಇದಕ್ಕಾಗಿ ರಿಟರ್ನ್ಸ್ ಪ್ರಕ್ರಿಯೆಗೊಳಿಸಲು, ತೆರಿಗೆದಾರರ ಗುರುತಿಸುವಿಕೆ ಮತ್ತು ನೋಂದಣಿಗೆ ವ್ಯವಸ್ಥೆ ಮಾಡಬೇಕು. ಐಎಂಎಫ್‌ನ ಆಡಳಿತ ರೋಗನಿರ್ಣಯ ಮೌಲ್ಯಮಾಪನದ ಶಿಫಾರಸುಗಳ ಆಧಾರದ ಮೇಲೆ ಸರ್ಕಾರವು ಆಡಳಿತ ಕ್ರಿಯಾ ಯೋಜನೆಯನ್ನು ಪ್ರಕಟಿಸಬೇಕು.2028 ರಿಂದ ಮುಂದಿನ ಹಣಕಾಸು ವಲಯದ ಕಾರ್ಯತಂತ್ರವನ್ನು ಸರ್ಕಾರವು ಸಿದ್ಧಪಡಿಸಿ ಪ್ರಕಟಿಸಬೇಕು. ಅನಿಲ ದರವನ್ನು ಪರಿಷ್ಕರಿಸಿ 2026 ರ ಫೆಬ್ರವರಿ 15 ರೊಳಗೆ ಅಧಿಸೂಚನೆ ಹೊರಡಿಸಬೇಕು.ವಿದ್ಯುತ್ ಶುಲ್ಕ ಸುಗ್ರೀವಾಜ್ಞೆಯನ್ನು ಶಾಶ್ವತಗೊಳಿಸಲು ಸಂಸತ್ತು ಈ ತಿಂಗಳ ಅಂತ್ಯದೊಳಗೆ ಕಾನೂನು ಅಳವಡಿಸಿಕೊಳ್ಳಬೇಕು. ಹಾಗೆಯೇ, ಸಾಲ ಸೇವೆ ಶುಲ್ಕದ ಮೇಲಿನ ಗರಿಷ್ಠ 3.21 ರೂಪಾಯಿ ಮಿತಿಯನ್ನು ತೆಗೆದುಹಾಕಲು ಸಂಸತ್ತು ಕಾನೂನು ಅಳವಡಿಸಿಕೊಳ್ಳಬೇಕು.


Related Articles

Leave a Reply

Your email address will not be published. Required fields are marked *

Back to top button