Rajakiyaಇತ್ತೀಚಿನ ಸುದ್ದಿದೇಶರಾಜಕೀಯರಾಜ್ಯಸುದ್ದಿ

ದಲಿತ ಬದಲು ಶೋಷಿತರ ಸಮಾವೇಶ ನಡೆಸಲು ತೀರ್ಮಾನ!

ರಾಜ್ಯದಲ್ಲಿ ದಲಿತ ಸಮಾವೇಶ ನಡೆಸಲು ಹೈಕಮಾಂಡ್‌ ಅನುಮತಿಗೆ ಕಾಯುತ್ತಿದ್ದ ಸಮುದಾಯದ ಸಚಿವರುಗಳು, ಇದಕ್ಕೆ ‘ಶೋಷಿತರ ಸಮಾವೇಶ’ ಎಂದು ಮರು ನಾಮಕರಣ ಮಾಡಿ ಮುಂದುವರಿಯಲು ನಿರ್ಧರಿಸಿದ್ದಾರೆ. ಜತೆಗೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಂದ ಈ ಕಾರ್ಯಕ್ರಮ ಉದ್ಘಾಟನೆ ಮಾಡಿಸಲು ಮುಂದಾಗಿದ್ದಾರೆ.ಸಚಿವರಾದ ಸತೀಶ್‌ ಜಾರಕಿಹೊಳಿ, ಕೆ.ಎನ್‌.ರಾಜಣ್ಣ ದಿಲ್ಲಿ ಪ್ರವಾಸ ಕೈಗೊಂಡು ಹೈಕಮಾಂಡ್‌ ಪ್ರತಿನಿಧಿಗಳನ್ನು ಭೇಟಿಯಾದ ಬಳಿಕ ಈ ಬೆಳವಣಿಗೆಯಾಗಿದೆ. ಈ ಬಗ್ಗೆ ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ರಾಜಣ್ಣ, ‘ಶೋಷಿತರ ಸಮಾವೇಶ ನಡೆಸುವ ಬಗ್ಗೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಳ್ಳಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ,’ ಎಂದು ತಿಳಿಸಿದ್ದಾರೆ. ‘ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಧಿಗೋಪಾಲ್‌ ಅವರೊಂದಿಗೆ ಈ ಸಂಬಂಧ ಚರ್ಚಿಸಲಾಗಿದೆ. 2028ರಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಸಂಘಟನಾ ಸಮಾವೇಶ ಅಗತ್ಯವೆಂದು ಗಮನಕ್ಕೆ ತರಲಾಗಿದೆ. ವರಿಷ್ಠರಿಗೂ ಇದು ಮನವರಿಕೆಯಾಗಿದೆ,’ ಎಂದು ಹೇಳಿದರು.

‘ರಾಜ್ಯದಲ್ಲಿನ ವಿದ್ಯಮಾನ, ಪಕ್ಷ ಹಾಗೂ ಸರಕಾರದ ವಿಚಾರವಾಗಿಯೂ ಚರ್ಚಿಸಲಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಕೆಳ ಸಮುದಾಯದವರಿಗೆ ಸ್ಥಾನಮನ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ,’ ಎಂದರು.ಶೋಷಿತರ ಸಮಾವೇಶ ನಡೆಸುವ ಸಂಬಂಧ ದಲಿತ ಸಚಿವರು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಬಳಿಕ ಸ್ಥಳ ಮತ್ತು ದಿನಾಂಕ ನಿಗದಿಯಾಗಲಿದೆ. ಸಚಿವರಾದ ಡಾ.ಜಿ.ಪರಮೇಶ್ವರ, ಡಾ.ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಕೆ.ಎನ್‌.ರಾಜಣ್ಣ ಸೇರಿದಂತೆ ಪ್ರಮುಖರು ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಒಗ್ಗಟ್ಟಿನ ಶಕ್ತಿಯಾಗಿ ದಲಿತರನ್ನು ಸಂಘಟಿಸಲು ವಿಭಾಗ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಸಮಾವೇಶ ಆಯೋಜಿಸುವ ತೀರ್ಮಾನದಿಂದ ಹಿಂದೆ ಸರಿಯಲು ನಿರಾಕರಿಸಿರುವ ಸಮುದಾಯದ ಸಚಿವರು, ತಮ್ಮ ಉದ್ದೇಶವನ್ನು ಹೈಕಮಾಂಡ್‌ಗೆ ಮನದಟ್ಟು ಮಾಡಿ ಅನುಮತಿ ಪಡೆಯಲು ದಿಲ್ಲಿಗೆ ತೆರಳಿದ್ದಾರೆ. ಮಾರ್ಚ್ 2ನೇ ವಾರದ ಬಜೆಟ್‌ ಅಧಿವೇಶನಕ್ಕೆ ಮುನ್ನವೇ ವಿಭಾಗ ಮಟ್ಟದಲ್ಲಿ ದಲಿತ ಸಮಾವೇಶಗಳನ್ನು ನಡೆಸುವ ಉಮೇದಿಯಲ್ಲಿದ್ದ ದಲಿತ ಸಚಿವರ ಉತ್ಸಾಹಕ್ಕೆ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮಧ್ಯಪ್ರವೇಶದಿಂದ ಬ್ರೆಕ್‌ ಬಿದ್ದಿತ್ತು. ಆದರೆ, ಈ ವಿಚಾರದಲ್ಲಿ ಹಿನ್ನಡೆ ಒಪ್ಪಿಕೊಳ್ಳಲು ಸುತಾರಾಂ ಸಿದ್ಧರಿಲ್ಲದ ಹಿರಿಯ ಸಚಿವರು, ಸದುದ್ದೇಶವನ್ನು ವಿವರಿಸಿ ದಲಿತ ಸಮಾವೇಶದ ವಿಚಾರದಲ್ಲಿ ಮುಂದುವರಿಯಲು ಒಪ್ಪಿಗೆಗಾಗಿ ವರಿಷ್ಠರ ಭೇಟಿಗೆ ನಿರ್ಧರಿಸಿದ್ದರು. ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ‘ದಲಿತರ ಸಮಾವೇಶ ನಡೆಸಲೇಬೇಕಿದೆ. ಮುಂದೆ ಎದುರಾಗುವ ಚುನಾವಣೆಗಳಿಗೆ ತಯಾರಾಗಲು ಇದು ಆಗಲೇಬೇಕು. ಹಾಸನದ ಸಮಾವೇಶದ ರೀತಿಯಲ್ಲೇ ಮಾಡುತ್ತೇವೆ,’ ಎಂದು ಸ್ಪಷ್ಟಪಡಿಸಿದ್ದರು.

ಈ ಹಿಂದೆ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಾಗ, ದಲಿತ ಸಮಾವೇಶಗಳ ರೂಪುರೇಷೆ ಸಿದ್ಧವಾಗಿತ್ತು. ಪರ್ಯಾಯ ನಾಯಕತ್ವದ ವಿಚಾರ ಬಂದಾಗ ಅವಕಾಶಕ್ಕಾಗಿ ದಲಿತರ ಧ್ವನಿ ಒಂದಾಗಿರಬೇಕು ಎಂಬುದು ಇದರ ಉದ್ದೇಶವಾಗಿತ್ತು. ಜತೆಗೆ ವಿಭಾಗ ಮಟ್ಟದಲ್ಲಿ ಹಾಗೂ 2ನೇ ಹಂತದಲ್ಲಿ ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ‘ದಲಿತ ಸಿಎಂ’ ಹಕ್ಕೊತ್ತಾಯಕ್ಕೆ ಹೊಳಪು ನೀಡಲು ಬಯಸಲಾಗಿತ್ತು. ಈ ಸಂಬಂಧ ತಯಾರಿ ಜೋರಾಗುತ್ತಲೇ ಪಕ್ಷದ ನಾಯಕತ್ವದ ದೂರು ಆಧರಿಸಿ ಸುರ್ಜೇವಾಲಾ ಮಧ್ಯ ಪ್ರವೇಶಿಸಿದ್ದರು. ಪಕ್ಷ ಸಂಘಟನೆ ದೃಷ್ಟಿಯಿಂದ ದಲಿತರ ಸಮಾವೇಶ ನಡೆಸುವುದಾದರೆ ಪಕ್ಷದ ವತಿಯಿಂದಲೇ ಮಾಡೋಣ. ಈ ಬಗ್ಗೆ ಚರ್ಚೆಗೆ ನಾನೂ ಬರುತ್ತೇನೆ. ಸದ್ಯಕ್ಕೆ ಈ ವಿಚಾರದಲ್ಲಿ ಮುಂದುವರಿಯುವುದು ಬೇಡ ಎಂದು ಫರ್ಮಾನು ಹೊರಡಿಸಿದ್ದರು. ಹಾಸನದ ಸಿಎಂ ನಾಯಕತ್ವ ಕೇಂದ್ರಿತ ‘ಸ್ವಾಭಿಮಾನಿ ಸಮಾವೇಶ’ವನ್ನು ‘ಕೃತಜ್ಞತಾ ಸಮಾವೇಶ’ವಾಗಿ ಬದಲಿಸಿದ ತಂತ್ರಗಾರಿಕೆಯನ್ನೇ ಈ ವಿಚಾರದಲ್ಲಿ ಪ್ರಯೋಗಿಸಲು ಸುರ್ಜೇವಾಲಾ ಬಯಸಿದ್ದರು. ಇದು ದಲಿತ ಸಮುದಾಯದ ಹಿರಿಯ ಸಚಿವರಲ್ಲಿ ತೀವ್ರ ಅಸಮಾಧಾನ ತಂದಿತ್ತು. ರಾಜ್ಯದಲ್ಲಿ ಅಹಿಂದ ಸಮುದಾಯ ಕಾಂಗ್ರೆಸ್‌ ಜತೆಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಪಕ್ಷದ ಮತಬ್ಯಾಂಕ್‌ ಆಗಿ ಭದ್ರಪಡಿಸಿಕೊಳ್ಳಲು ಇಂತಹ ಸಮಾವೇಶ ಅಗತ್ಯ ಎಂಬುದನ್ನು ವರಿಷ್ಠರಿಗೆ ಮನದಟ್ಟು ಮಾಡಿಕೊಟ್ಟು ತಮ್ಮ ಉದ್ದೇಶದ ಹಾದಿಯಲ್ಲಿ ಮುಂದುವರಿಯಲು ದಲಿತ ಸಚಿವರು ಬಯಸಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button