
ಮೈಸೂರು:ತನ್ನ ತಾಯಿ ಬಗ್ಗೆ ಅವಾಚ್ಯವಾಗಿ ಬೈದಿದ್ದರಿಂದ ರೊಚ್ಚಿಗೆದ್ದ ವ್ಯಕ್ತಿ ತನ್ನ ಚಿಕ್ಕಪ್ಪನ ಮಗನನ್ನು ದೊಣ್ಣೆಯಿಂದ ಹೊಡೆದು ಸಾಯಿಸಿದ್ದ ಪ್ರಕರಣದಲ್ಲಿ ಆರೋಪಿಗೆ 5 ವರ್ಷ ಸಜೆ ಹಾಗು 25 ಸಾವಿರ ರೂಪಾಯಿ ದಂಡ ವಿಧಿಸಿ ಮೈಸೂರಿನ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿ ಅಂಗ್ರೇಜ್ ರಾಮ್ ಬಿನ್ ಮದನ್ ರಾಮ್ ಎಂಬಾತನು ರಾಜಸ್ಥಾನದ, ನಾಗುರ್ ಜಿಲ್ಲೆ, ಜಹೇಲ್ ತಾಲ್ಲೂಕಿನ ವಿವಾಡ್ ಗ್ರಾಮದ ನಿವಾಸಿಯಾಗಿದ್ದು, ನಂಜನಗೂಡಿನ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಅವಿಷ್ಕಾರ್ ಸ್ಟೋನ್ ಫ್ಯಾಕ್ಟರಿಯಲ್ಲಿ ಪಾಲಿಷ್ ಕೆಲಸ ಮಾಡಿಕೊಂಡಿದ್ದ. ಈತನು ಕೆಲಸಕ್ಕೆ ಸೇರಿದನಂತರ ಈತನ ಚಿಕ್ಕಪ್ಪನ ಮಕ್ಕಳಾದ ಸುರೇಶ ಮತ್ತು ಮುಖೇಶ ಎಂಬುವವರು ಕೂಡಾ ತಮ್ಮ ಊರಾದ ರಾಜಸ್ಥಾನದ, ನಾಗುರ್ ಜಿಲ್ಲೆ, ಜಹೇಲ್ ತಾಲ್ಲೂಕಿನ ಏವಾಡ್ ಗ್ರಾಮದಿಂದ ಬಂದು ಅಂಗ್ರೇಜ್ ರಾಮ್ ನೊಂದಿಗೆ ಅವಿಷ್ಕಾರ್ ಸ್ಟೋನ್ ಸ್ಟೋನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.ಇವರು ಮೂರು ಜನರೂ ಫ್ಯಾಕ್ಟರಿಯವರು ಕೊಟ್ಟಿರುವ ರೂಂನಲ್ಲಿ ಜೊತೆಯಾಗಿ ಉಳಿದುಕೊಂಡು ಕೆಲಸ ಮಾಡುತ್ತಿದ್ದರು.
ಅಕ್ಟೋಬರ್ 24 ರಂದು ದೀಪಾವಳಿ ಹಬ್ಬವಿದ್ದುದರಿಂದ ಕೆಲಸಕ್ಕೆ ರಜೆ ಕೊಟ್ಟಿದ್ದರಿಂದ ಮೂವರೂ ಊಟ ಮುಗಿಸಿದ್ದು, ಅಂಗ್ರೇಜ್ ರಾಮ್ ಮತ್ತು ಸುರೇಶ ರೂಮಿನ ಹೊರಗಡೆ ಮಾತನಾಡುತ್ತಿದ್ದಾಗ ರಾತ್ರಿ ಸುಮಾರು 10.00 ಗಂಟೆಯಲ್ಲಿ ಸುರೇಶನು ಅಂಗ್ರೇಜ್ ರಾಮನ ತಾಯಿಯ ಬಗ್ಗೆ ಕೆಟ್ಟದಾಗಿ ಬೈದಾಗ ಅಂಗ್ರೇಜ್ ರಾಮನು ಕೋಪಗೊಂಡು ಏಕಾಏಕಿ ಮರದ ರೀಪೀಸ್ ಪಟ್ಟಿಯಂತಿರುವ ದೊಣ್ಣೆಯಿಂದ ಸುರೇಶನ ತಲೆಗೆ, ಮುಖಕ್ಕೆ, ಎದೆಗೆ ಹಾಗೂ ಮೈಕೈಗೆ ತೀವ್ರವಾಗಿ ಗಾಯಗೊಳಿಸಿದ್ದು, ಸುರೇಶನ ಕಿವಿ, ಬಾಯಿ ಹಾಗೂ ಮೂಗಿನಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದ
ಈ ಬಗ್ಗೆ ಮೃತನ ತಮ್ಮ ಮುಖೇಶ ನೀಡಿದದೂರಿನ ಮೇರೆಗೆ ನಂಜನಗೂಡು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೋಲಿಸ್ ನಿರೀಕ್ಷಕ ಶಿವನಂಜಶೆಟ್ಟಿ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ನ್ಯಾಯಾಲಯ. ಭ್ರಷ್ಟಾಚಾರ ನಿಗ್ರಹ ಕಾಯ್ದೆ)ದ ನ್ಯಾಯಾಧೀಶರಾದ ಕೆ. ಭಾಗ್ಯ ಅವರು ಆರೋಪಿ ಅಂಗ್ರೇಜ್ ರಾಮನು ಸುರೇಶನು ತನ್ನ ತಾಯಿಗೆ ಅವಾಚ್ಯವಾಗಿ ಬೈದಿದ್ದರಿಂದ, ಜಗಳವಾಗುವಾಗ ಹಠಾತ್ ಪ್ರಚೋದನೆಗೆ ಒಳಗಾಗಿ ಯಾವುದೇ ಪೂರ್ವನಿಯೋಜನೆ ಇಲ್ಲದೇ ಸುರೇಶನನ್ನು ದಂಡನೀಯ ನರಹತ್ಯೆ ಮಾಡಿರುವುದು ರುಜುವಾತಾಗಿದೆಯೆಂದೂ, ಆರೋಪಿಯು ಭಾರತೀಯ ದಂಡ ಸಂಹಿತೆಯ ಕಲಂ 304ರಡಿಯಲ್ಲಿ ಅಪರಾಧವೆಸಗಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ ಆತನಿಗೆ ಶಿಕ್ಷೆಯನ್ನು ವಿಧಿಸಿದ್ದಾರೆ
ಆರೋಪಿಗೆ 5 ವರ್ಷಗಳ ಸಜೆಯನ್ನು ವಿಧಿಸಿದ್ದು ಹಾಗೂ ರೂ.25,000/- ದಂಡವನ್ನು ವಿಧಿಸಿದ್ದು ದಂಡವನ್ನು ತೆರಲು ತಪ್ಪಿದಲ್ಲಿ 1 ವರ್ಷದ ಸಜೆಯನ್ನು ಅನುಭವಿಸುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ.ಟಿ.ಹೆಚ್.ರವರು ವಾದ ಮಂಡಿಸಿದ್ದರು
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಲೋಲಾಕ್ಷಿ.ಟಿ.ಹೆಚ್.ರವರು ವಾದಿಸಿರುತ್ತಾರೆ.