ಡಿ ಪಾರಾದ ವಕೀಲನಿಂದ ವಕಾಲತ್ತು ಮಾಡಲಾಗಲ್ಲ, ಪೊಲೀಸ್ ರೆಕಾರ್ಡ್ಸ್ ಪರಿಶೀಲಿಸದೇ ಖಾದ್ರಿ ನೇಮಕವನ್ನು ಒಪ್ಪಿಕೊಂಡ ಕಾನೂನು ಸಚಿವ

“ಗಡಿ ಪಾರಾದ ವಕೀಲ ಕೋರ್ಟ್ಗೆ ಬಂದು ವಕಾಲತ್ತು ಮಾಡಲು ಆಗುವುದಿಲ್ಲ. ಇವರ ಪೊಲೀಸ್ ರೆಕಾರ್ಡ್ಸ್ ಸರ್ಕಾರ ಪರಿಶೀಲಿಸಿಲ್ಲ” ಎಂದು ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಒಪ್ಪಿಕೊಂಡಿದ್ದಾರೆ.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಚರ್ಚೆ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, “ವಿಜಯಪುರ ಜಿಲ್ಲೆಗೆ ಸರ್ಕಾರಿ ಅಭಿಯೋಜಕರಾಗಿ ವಕೀಲ ಸೈಯದ್ ಬಾಷಾ ಖಾದ್ರಿ ನೇಮಕ ಮಾಡಲಾಗಿದೆ. ಸೈಯದ್ ಬಾಷಾ ಖಾದ್ರಿ ಒಬ್ಬ ಕ್ರಿಮಿನಲ್, ಕೊಲೆಗಡುಕ. ಈತ ಕ್ರಿಮಿನಲ್ ಶಿಕ್ಷೆಗೆ ಗುರಿಯಾಗಿ ಗಡೀಪಾರು ಶಿಕ್ಷೆಗೂ ಗುರಿಯಾಗಿದ್ದ. ಇಂಥ ಕ್ರಿಮಿನಲ್ನನ್ನು ಸರ್ಕಾರಿ ಅಭಿಯೋಜಕ ಮಾಡಿದೆ ಸರ್ಕಾರ. ಇದು ಓಲೈಕೆಯ ಅತಿರೇಕತನ, ಈತನನ್ನು ಸರ್ಕಾರ ತಕ್ಷಣ ವಜಾ ಮಾಡಬೇಕು” ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕಾನೂನು ಸಚಿವ ಹೆಚ್. ಕೆ. ಪಾಟೀಲ್, “ಇವರನ್ನು ಒಂದು ವರ್ಷದ ಮಟ್ಟಿಗೆ ಆಯ್ಕೆ ಮಾಡಲಾಗಿದೆ. ಗಡೀಪಾರಾದ ವಕೀಲ ಕೋರ್ಟ್ಗೆ ಬಂದು ವಕಾಲತ್ತು ಮಾಡಲು ಆಗೋದಿಲ್ಲ. ಇವರ ಪೊಲೀಸ್ ರೆಕಾರ್ಡ್ಸ್ ಸರ್ಕಾರ ಪರಿಶೀಲಿಸಿಲ್ಲ” ಅಂತ ಒಪ್ಪಿಕೊಂಡರು.
“ಸೈಯದ್ ಬಾಷಾ ಖಾದ್ರಿ ವಜಾ ಮಾಡದಿದ್ರೆ ಇಲ್ಲೇ ಧರಣಿ ಕೂರುವುದಾಗಿ” ಯತ್ನಾಳ್ ಎಚ್ಚರಿಕೆ ನೀಡಿದರು. ಅದಕ್ಕೆ, “ಸರ್ಕಾರದ ಹಂತದಲ್ಲಿ ಇದನ್ನು ಪರಿಶೀಲಿಸುತ್ತೇವೆ. ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಸಚಿವ ಹೆಚ್. ಕೆ. ಪಾಟೀಲ್ ಭರವಸೆ ನೀಡಿದರು.
ಸಚಿವ ಹೆಚ್. ಕೆ. ಪಾಟೀಲ್ ಸ್ಪಷ್ಟನೆಗೆ ಒಪ್ಪದೇ ಸದನದಲ್ಲೇ ಯತ್ನಾಳ್ ಧರಣಿ ಕೂತರು. ಸದನದ ಬಾವಿಗಿಳಿದು ಯತ್ನಾಳ್ ಧರಣಿ ಆರಂಭಿಸಿದರು. ಸೋಮವಾರ ಇದಕ್ಕೆ ಉತ್ತರ ಕೊಡಿಸೋದಾಗಿ ಸ್ಪೀಕರ್ ಭರವಸೆ ನೀಡಿದ ಬಳಿಕ ಯತ್ನಾಳ್ ಧರಣಿ ವಾಪಸ್ ಪಡೆದರು.


