
ಬೆಂಗಳೂರು: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಕೈಗೊಂಡಿದ್ದು ಅಭಿನಂದನಾರ್ಹ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸಿಎಂ ಸರ್ಕಾರಿ ನಿವಾಸದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕುಂಕುಮ ಧರಿಸಿ ಆಗಮಿಸಿದ ಅವರು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆಗೆ ನಾವು ನಿಲ್ಲುತ್ತೇವೆ ಎಂದರು.ದೇಶದ ರಕ್ಷಣಾ ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಉಗ್ರಗಾಮಿ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮರೆದಿದ್ದಾರೆ. ನಮ್ಮ ದೇಶದ ಸೈನಿಕರಿಗೆ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ದೇಶದ ಸೇನೆ ‘ಆಪರೇಷನ್ ಸಿಂಧೂರ್’ ಆಪರೇಷನ್ ಹೆಸರಿನಲ್ಲಿ 9 ನೆಲೆಗಳಲ್ಲಿ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ನಾಗರೀಕರ ಮೇಲೆ ದಾಳಿ ಮಾಡಿಲ್ಲ. ಕೇವಲ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ವಿವರಿಸಿದರು.ಉಗ್ರರಿಗೆ ಬೆಂಬಲ ಕೊಡುವ ಕೆಲಸ ಪಾಕಿಸ್ತಾನ ಮಾಡುತ್ತಿದೆ. ಪಹಲ್ಗಾಮ್ ನಲ್ಲಿ 26 ಅಮಾಯಕ ತನ್ನ ಕೊಲೆ ಮಾಡಲಾಗಿದೆ. ಇವರಿಗೆ ಪಾಕಿಸ್ತಾನದ ಬೆಂಬಲ ಇದೆ. ಈ ಘಟನೆ ನಂತರವೂ ಉಗ್ರರಿಗೆ ಬೆಂಬಲ ಕೊಡುವುದು ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಒಂಬತ್ತು ಉಗ್ರರ ನೆಲೆಯನ್ನು ಧ್ವಂಸ ಮಾಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಯಾವತ್ತು ಪಾಕಿಸ್ತಾನ ಖಂಡಿಸುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು.
ಈ ಹಠಮಾರಿತನ ವಿರೋಧಿಸಿ ಭಾರತ ದಾಳಿ ಮಾಡಿದೆ. ಈ ದಾಳಿಯನ್ನು ನಾನು ಬೆಂಬಿಸುತ್ತೇನೆ. ಇದೊಂದು ಎಚ್ಚರಿಕೆಯ ಗಂಟೆ ಪಾಕಿಸ್ತಾನಕ್ಕೆ. ಭಾರತದ ಸೈನಿಕರು ಉಗ್ರರ ನೆಲೆಗಳಿಗೆ ಮಾತ್ರ ದಾಳಿ ಮಾಡಿದ್ದಾರೆ. ಅಮಾಯಕರ ಸಾವು ನೋವು ಆಗದಂತೆ ನೋಡಿಕೊಂಡಿದ್ದಾರೆ. ಸೈನಿಕರ ಕಾರ್ಯ ಹಾಗೂ ಪರಿಮಿತಿಗೆ ನಮ್ಮ ಸರ್ಕಾರ ಮತ್ತು ರಾಜ್ಯ ದೊಡ್ಡ ಸಲಾಂ ನೀಡುತ್ತದೆ ಎಂದು ಅಭಿನಂದನೆ ಸಲ್ಲಿಸಿದರು.
ಸರ್ಕಾರದ ಪರವಾಗಿ ಈ ದಾಳಿಗೆ ಬೆಂಬಲ ಘೋಷಿಸುತ್ತೇನೆ. ನಾವೆಲ್ಲರೂ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕೆಲಸ ಮಾಡುತ್ತೇವೆ. ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ರಾಜ್ಯದಲ್ಲೂ ಎಲ್ಲಾ ರೀತಿಯ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.
ಉಗ್ರರ ಮೇಲಿನ ದಾಳಿ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ನಡೆಯಬೇಕಾಗಿದ್ದ ಪ್ರತಿಭಟನೆ ರದ್ದು ಮಾಡಿದ್ದೇವೆ. ಬೆಲೆ ಏರಿಕೆ ಹಾಗೂ ಸಂವಿಧಾನ ಉಳಿಸಿ ಪ್ರತಿಭಟನೆ ಇಟ್ಟುಕೊಂಡಿದ್ದೆವು. ಆದರೆ ಈ ಸಂದರ್ಭದಲ್ಲಿ ದೇಶದ ಸೈನಿಕರಿಗಾಗಿ ಈ ಪ್ರತಿಭಟನೆಯನ್ನು ರದ್ದು ಮಾಡಿದ್ದೇವೆ ಎಂದು ತಿಳಿಸಿದರು.ಕೇಂದ್ರ ಸರ್ಕಾರದ ಜೊತೆಗೆ ಜನರು ನಿಲ್ಲಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.