
ಹನೂರು: ಹನೂರು ತಾಲೂಕು ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳಿಗಿಡುವ ಸಿಡಿ ಮದ್ದನ್ನು(ಹಂದಿ ಗುಂಡು) ಮೇವೆಂದು ಮೇದು ಬಾಯಿ ಸ್ಪೋಟಗೊಂಡು ರಾಸುಗಳು ಸರಣಿ ಸಾವು ನೋವಿಗೀಡಾಗುತ್ತಿರುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿದ್ದರೂ ನೈಜ ಹಾಗೂ ಉಳಿದ ಆರೋಪಿಗಳನ್ನು ಬಂಧಿಸಿ ಮೂಕ ಪ್ರಾಣಿಗಳ ಮಾರಣ ಹೋಮ ತಪ್ಪಿಸುವಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿರುವುದಾಗಿ ಈ ಭಾಗದ ರೈತರು ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಳ್ಳೇಗಾಲ ಗ್ರಾಮಾಂತರ, ರಾಮಾಪುರ. ಕುದೇರು ಪೊಲೀಸ್ ಠಾಣಾ ಸರಹದ್ದು ಗ್ರಾಮಗಳ ಹೊರ ಹೊಲಯದಲ್ಲಿ ಒಂದು ತಿಂಗಳಿನಿಂದ ಮಾಂಸಕ್ಕಾಗಿ ಕಾಡು ಹಂದಿಗಳನ್ನು ಬೇಟೆಯಾಡಲು ದುಷ್ಕರ್ಮಿಗಳು ಸ್ಪೋಟಕ ಹಂದಿ ಗುಂಡುಗಳನ್ನು ತಯಾರಿಸಿ ಮುಸುಕಿನ ಜೋಳದ ಸಂಡು ಹಾಗೂ ಮೇವಿನ ಜತೆ ಪಾಳು ಜಮೀನು ಹಾಗೂ ಕಾಡಂಚಿನ ಪ್ರದೇಶಗಲ್ಲಿ ಇಟ್ಟಿದ್ದು ಮೇವನ್ನು ಅರಸಿ ಬರುವ ಜಾನುವಾರುಗಳು ಇವುಗಳನ್ನು ಮೇವೆಂದು ಭಾವಿಸಿ ತಿನ್ನುವ ಭರದಲ್ಲಿ ಬಾಯಿಂದ ಅಗಿಯುತ್ತಿದ್ದಂತೆ ಸ್ಪೋಟಿಸಿದ ಹಂದಿ ಗುಂಡುಗಳು ಜಾನುವಾರುಗಳ ಬಾಯಿ ಹಾಗೂ ಮುಖವನ್ನು ಛಿದ್ರಗೊಳಿಸಿ ಮೇವು ಮೇಯದಂತೆ ಗಂಭೀರವಾಗಿ ಗಾಯಗೊಂಡು ಮೃತಪಡುತ್ತಿರುವ ಬಗ್ಗೆ ರಾಮಾಪುರ, ಹನೂರು, ಕೊಳ್ಳೇಗಾಲ ಗ್ರಾಮಾಂತರ ಕುದೇರು ಪೊಲೀಸ್ ಠಾಣೆ ಸೇರಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು.
ಈ ಹಿನ್ನೆಲೆಯಲ್ಲಿ ಈ ಪ್ರಕರಣ ಭೇದಿಸಲು ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ರಾಮಾಪುರ ಪಿಐ ಪಿಎನ್. ಶೇಷಾದ್ರಿ ಹಾಗೂ ಪಿಎಸ್ ಐ ಲೋಕೇಶ್ ನೇತೃತ್ವದಲ್ಲಿ ಏಳು ಮಂದಿ ಪೊಲೀಸ್ ಹಾಗೂ ಕೊಳ್ಳೇಗಾಲ ಉಪ ವಿಭಾಗದ ಅಪರಾಧ ಪತ್ತೆ ತಂಡ ರಚಿಸಲಾಗಿತ್ತು.
ಆರಂಭ ಶೂರತ್ವ ಎಂಬಂತೆ ಇದೇ ತಂಡ ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನೋ ಹಾಗೆ ರಾಮಾಪುರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಭದ್ರಯ್ಯನಹಳ್ಳಿ ಗ್ರಾಮದ ಹೊರ ವಲಯದಲ್ಲಿ ರಾಸುವೊಂದು ಹಂದಿ ಗುಂಡನ್ನು ಮೇವೆಂದು ಬಾವಿಸಿ ಮೇದಾಗ ಸ್ಟೋಟಗೊಂಡು ಬಾಯಿ ಛಿದ್ರಗೊಂಡು ಸಾವಿಗೀಡಾದ ಮೊ.ಸಂ.36/2025 ಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ತಾಲ್ಲೂಕು ಕುಣಗಳ್ಳಿ ಗ್ರಾಮದ ರಾಮಶೆಟ್ಟಿ ಹಾಗೂ ಸೋಮಣ್ಣ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿ ಬಂಧಿತರಿಂದ 34 ಜೀವಂತ ಸ್ಪೋಟಕ ಹಂದಿ ಗುಂಡುಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೊಪ್ಪಿಸಿರುವುದಾಗಿ ಪ್ರೆಸ್ ನೋಟ್ ನೀಡಿ ಕೈ ತೊಳೆದು ಕೊಂಡರು. ಈ ತಂಡಕ್ಕೆ ಎಸ್ಪಿಯವರಿಂದ ಪ್ರಶಂಸೆಯೂ ದೊರೆಯಿತು.ತದ ನಂತರದಲ್ಲೂ ಈ ಆರೋಪಿಗಳಿಬ್ಬರು ಬಂಧನದಲ್ಲಿದ್ದಾಗಲೇ ಹಲವೆಡೆ ಮತ್ತಂತದೇ ಮೂರ್ನಾಲ್ಕು ಪ್ರಕರಣಗಳು ಒಂದರ ಹಿಂದೊಂದರಂತೆ ಸಾಲು ಸಾಲಾಗಿ ನಡೆದು ಹಲವಾರು ರಾಸುಗಳು ಬೀಭತ್ಸವಾಗಿ ಗಾಯಗೊಂಡು ಮೇವು ಮೇಯಲಾಗದೆ ನರಳಿ ನರಳಿ ಪ್ರಾಣಬಿಟ್ಟಿವೆ.
ಪೊಲೀಸರು ಎಫ್ ಐಆರ್ ನಲ್ಲಿ ದಾಖಲಿಸಿರುವಂತೆ ಬಂಧಿತ ಆರೋಪಿಗಳು ರಾಮಾಪುರ ಪೊಲೀಸ್ ಠಾಣೆ ಸರಹದ್ದಿನ ಭದ್ರಯ್ಯನ ಹಳ್ಳಿಯಲ್ಲಿ ಅಕ್ರಮ ಹಂದಿ ಗುಂಡು ಇರಿಸಿದ್ದು ಸಾಬೀತಾಗಿರುವುದರಿಂದ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಡಿದ್ದೇವೆಂದು ಆದರೂ ಕೂಡಾ ಮತ್ತಂತದೆ ಪ್ರಕರಣಗಳು ಅದೇ ಪ್ರದೇಶದಲ್ಲಿ ಪುನರಾವರ್ತನೆಯಾಗುತ್ತಿದ್ದು ಅದನ್ನು ಮೇದ ರಾಸುಗಳು ದುಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಸೆಣಸಾಡುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದ ಮೇಲೆ ಹೊಸದಾಗಿ ಮತ್ಯಾರು ಹಂದಿ ಗುಂಡುಗಳನ್ನು ಇಟ್ಟವರು..? ಅವರುಗಳಿಗೆ ಹಂದಿ ಗುಂಡುಗಳು ಎಲ್ಲಿಂದ ದೊರೆತವು..? ಈ ಪ್ರಶ್ನೆಗೆ ಹಿರಿಯ ಪೊಲೀಸ್ ಅಧಿಕಾರಿಗಳೇ ಉತ್ತರ ನೀಡಬೇಕಿದೆ.
ಇದನ್ನೆಲ್ಲಾ ಅವಲೋಕಿಸಿದಾಗ ಪೊಲೀಸರ ತನಿಖೆಯ ಪ್ರಕಾರ ಸ್ಪೋಟಕ ಹಂದಿ ಗುಂಡುಗಳನ್ನು ಇಡುತಿದ್ದರೆಂದು ಒಂದಿಬ್ಬರನ್ನು ಬಂಧಿಸಿದಾಕ್ಷಣ ಪ್ರಕರಣಗಳು ಅಂತ್ಯಗೊಂಡಿಲ್ಲ. ಹಲವೆಡೆ ಕೇವಲ ಈ ಇಬ್ಬರೇ ಏಕ ಕಾಲದಲ್ಲಿ ಇಂತಹುದೆ ಹಲವು ಕೃತ್ಯಗಳನ್ನು ನಡೆಸಲು ಸಾಧ್ಯವೆ..? ಇದರಿಂದಲೇ ಗೊತ್ತಾಗುತ್ತದೆ ಬೇರೆಲ್ಲೋ ಅಪರಾಧವೆಸಗಿದವರನ್ನು ಪೊಲೀಸರು ಆತುರಾತುರದಲ್ಲಿ ತೋಚಿದ್ದೇ ಗೀಚಿದ್ದು ಎಂಬಂತೆ ಬಲವಂತವಾಗಿ ಈ ಪ್ರಕರಣದಲ್ಲಿ ಥಳುಕು ಹಾಕಿ ಕೈತೊಳೆದುಕೊಂಡಿರುವುದಕ್ಕೆ ಇದೇ ಸ್ಪಷ್ಟ ನಿದರ್ಶನವಾಗಿದೆ.
ರಕ್ತ ಬೀಜಾಸುರರ ವಂಶದಂತೆ ಕಾಡಂಚಿನ ಗ್ರಾಮಗಳು ಹಾಗೂ ಹಳ್ಳಿ ಹಳ್ಳಿಗಳಲ್ಲಿ ಇಂತಹ ಹಂದಿ ಗುಂಡುಗಳನ್ನು ತಯಾರಿಸಿ ಹಂದಿ ಬೇಟೆಯನ್ನೇ ವೃತ್ತಿಯಾಗಿಸಿಕೊಂಡಿರುವವರು ಯಥೇಚ್ಛವಾಗಿದ್ದು ಅಂತಹವರುಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟುವ ಮೂಲಕ ಮರುಕಳಿಸುತ್ತಿರುವ ರಾಸುಗಳ ಮಾರಣ ಹೋಮವನ್ನು ತಪ್ಪಿಸಬೇಕಿದೆ. ಇಲ್ಲದಿದ್ದಲ್ಲಿ ಮಾರಣ ಹೋಮ ನಿಲ್ಲಲ್ಲ. ಪೊಲೀಸರಿಗೆ ತಲೆ ನೋವು ತಪ್ಪಲ್ಲ.
ರಾಸುಗಳ ಮಾರಣ ಹೋಮಕ್ಕೆ ಇತಿ ಶ್ರೀ ಹಾಡಲು ಇತ್ತ ತಾಲ್ಲೂಕು ಆಡಳಿತ ಸಭೆ ನಡೆಸುತ್ತಿದ್ದರೆ ಅತ್ತ ಸ್ಪೋಟಕ್ಕೆ ಮತ್ತೊಂದು ಹಸು ಬಲಿ..!
ರಾಮಾಪುರ ಪೊಲೀಸ್ ಠಾಣಾ ಸರಹದ್ದಿನ ಕೌದಳ್ಳಿ ಶೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳುಗಳಿಂದ ಸುಮಾರು ಐದಾರು ಪ್ರಕರಣದಲ್ಲಿ ಹಂದಿ ಗುಂಡುಗಳು ಸಿಡಿದು ರಾಸುಗಳಿಗೆ ತೀವ್ರವಾದ ಗಾಯಗಳಾಗಿ ಸಾವು ನೋವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ತಾಲ್ಲೂಕು ಆಡಳಿತ ನಿನ್ನೆ ಹನೂರು ತಾಲ್ಲೂಕಿನ ತಹಸೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ತಾ.ಪಂ.ಇ ಓ ಉಮೇಶ್, ರಾಮಾಪುರ ಆರಕ್ಷಕ ನಿರೀಕ್ಷಕರು, ಸಹಾಯಕ ನಿರ್ದೇಶಕರು ಪಶು ಸಂಗೋಪನೆ ಇಲಾಖೆ, ಅರಣ್ಯಾಧಿಕಾರಿಗಳು ಹಾಗೂ ಗ್ರಾಮಪಂಚಾಯಿತಿ ಸದಸ್ಯರು, ಮುಖಂಡರು, ರೈತ ಸಂಘಟನೆಯ ಸದಸ್ಯರುಗಳ ಸಮಕ್ಷಮದಲ್ಲಿ ಕೌದಳ್ಳಿ ಅರಣ್ಯ ಕಚೇರಿಯ ಆವರಣದಲ್ಲಿ ಸಭೆ ನಡೆಯುತ್ತಿದ್ದಾಗಲೇ ಅತ್ತ ಕೌದಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಸಮೀಪದ ಜಮೀನಲ್ಲೊಂದೆಡೆ ಹಸುವಿಗೆ ಹಂದಿ ಗುಂಡು ಸಿಡಿತದಿಂದ ಗಾಯವುಂಟಾಗಿರುವುದು ತಾಲ್ಲೂಕು ಆಡಳಿತವನ್ನೇ ಬೆಚ್ಚಿ ಬೀಳಿಸಿದ್ದು ಆತಂಕಕ್ಕೆ ಕಾರಣವಾಗಿದೆ.