ರಾಜ್ಯ
Trending

ಕಟ್ಟಡದ ಈ ಪ್ರಮುಖ ದಾಖಲೆ ಸಲ್ಲಿಸದಿದ್ರೆ ವಿದ್ಯುತ್‌ ಸಂಪರ್ಕ ಕಡಿತ ಫಿಕ್ಸ್‌!

​ಬೆಂಗಳೂರು: ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲವಾದರೆ ನಿಮ್ಮನೆ, ಕಟ್ಟಡದ ವಿದ್ಯುತ್‌ ಸಂಕರ್ಪ ಕಡಿತ ಗ್ಯಾರಂಟಿ. ಈ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶ ಹೊರಡಿಸಿದೆ. ಬೆಸ್ಕಾಂ ಸೇರಿ ಎಲ್ಲಾ ಎಸ್ಕಾಂಗಳೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದಲ್ಲಿ “ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಮಾಣ ಆಗುತ್ತಿರುವ ಕಟ್ಟಡವನ್ನು ನಿರಂತವಾಗಿ ಪರಿಶೀಲನೆ ನಡೆಸಬೇಕು. ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಬಳಿಕವಷ್ಟೇ ಸ್ವಾಧೀನಾನುಭವ ಪತ್ರ ವಿತರಣೆ ಮಾಡಬೇಕು. ಕಟ್ಟಡ ನಿಯಮ ಉಲ್ಲಂಘಿಸಿ ನಿರ್ಮಾಣ ಆಗಿದ್ದರೆ ಒಸಿ ನೀಡದೇ, ಕ್ರಮ ಕೈಗೊಳ್ಳಬೇಕು. ಒಸಿ ವಿತರಣೆ ಬಳಿಕವಷ್ಟೇ ನೀರಿನ ಸಂಪರ್ಕ, ವಿದ್ಯುತ್‌ ಸಂಪರ್ಕ, ಒಳಚರಂಡಿ ಸಂಪರ್ಕ ನೀಡಬೇಕು ಎಂದು ಉಲ್ಲೇಖಿಸಿದೆ.ಕಟ್ಟಡ ಸ್ವಾಧೀನಾನುಭವ ಪತ್ರ (ಒಸಿ) ಬಿಬಿಎಂಪಿ, ನಗರ ಸಭೆ, ಮಹಾನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಂದ ನೀಡಲಾಗುವ ಕಾನೂನುಬದ್ಧ ದಾಖಲೆಯಾಗಿದೆ. ಈ ಪತ್ರ ಕಟ್ಟಡವು ಅನುಮತಿ ಪಡೆದ ನಕ್ಷೆಯಂತೆ ನಿರ್ಮಾಣವಾಗಿದೆಯೇ, ವಾಸಕ್ಕೆ ಸುರಕ್ಷಿತವಾಗಿದೆ ಎಂಬುದನ್ನು ದೃಢಪಡಿಸುತ್ತದೆ.

ಬಿಬಿಎಂಪಿ ಆಯುಕ್ತರು ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಮೇಲೆ ಕೈಗೊಳ್ಳಬೇಕಾದ ನಿಯಮಗಳನ್ನು ಜಾರಿ ಮಾಡಿದ್ದಾರೆ. ಅಕ್ರಮ ನಿರ್ಮಾಣಗಳಿಗೆ ವಿದ್ಯುತ್‌ ಮತ್ತು ನೀರು, ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸಲು ಆಯಾ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ. ಕಟ್ಟಡ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸುತ್ತಿದ್ದರೆ ಆ ಸಂದರ್ಭದಲ್ಲೇ ನೋಟಿಸ್‌ ಜಾರಿ ಮಾಡಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.ಬೆಸ್ಕಾಂ 2016 ರಲ್ಲೇ ಯಾವುದೇ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪತ್ರ ಕಡ್ಡಾಯ ಎಂಬ ನಿಯಮವನ್ನು ಮಾಡಿತ್ತು.ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಚಾಮುಂಡೇಶ್ವರಿ (ಮೈಸೂರು), ಕಲಬುರಗಿ, ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸರಬರಾಜು ಕಂಪನಿಗಳು ಆರೂ ಎಸ್ಕಾಂಗಳು ಒಸಿ ಪ್ರಮಾಣಪತ್ರ ಇಲ್ಲದವರಿಗೆ ಹೊಸ ವಿದ್ಯುತ್‌ ಸಂಪರ್ಕ ನೀಡದಂತೆ ಕೆಇಆರ್‌ಸಿ ಸೂಚನೆ ನೀಡಿದೆ. ಇನ್ನು ಬಾಕಿ ಉಳಿಸಿಕೊಂಡವರು ಶೀಘ್ರವೇ ಒಸಿ ನೀಡಬೇಕು ಎಂದು ನೋಟಿಸ್‌ ಜಾರಿ ಮಾಡಲು ನಿರ್ಧರಿಸಿದೆ. ನೋಟಿಸ್‌ ಸಿಕ್ಕು 7 ದಿನದೊಳಗೆ ಒಸಿ ಸಲ್ಲಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಮಾಡಲು ಮುಂದಾಗಿದೆ.ಇತ್ತೀಚೆಗೆ ಅನಧಿಕೃತ ಕಟ್ಟಡಗಳಲ್ಲಿ ವಿದ್ಯುತ್‌ ಅವಘಡಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಟ್ಟಡವು ನಿಯಮ ಉಲ್ಲಂಘನೆ ಮಾಡಿ ನಿರ್ಮಾಣ ಅನಧಿವೃವಾಗಿ ಮಾಡಿರುವುದು ಪ್ರಮುಖ ಕಾರಣ ಎಂದು ತಿಳಿದುಬಂದಿದೆ. 2024ರ ಡಿ.17 ರಂದು ಸುಪ್ರೀಂ ಕೋರ್ಟ್‌ ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆದೇಶ ನೀಡಿದೆ. ಈ ಹಿನ್ನೆಲೆ ನಿಯಮ ಉಲ್ಲಂಘಿಸಿ, ಪ್ರಮುಖವಾಗಿ ಸ್ವಾಧೀನಾನುಭವ ಪತ್ರ ಇಲ್ಲದಿರುವ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕವನ್ನೇ ನೀಡಬಾರದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಆದೇಶ ಹೊರಡಿಸಿದೆ.

Related Articles

Leave a Reply

Your email address will not be published. Required fields are marked *

Back to top button