ಭಾರತೀಯ ಯುದ್ಧನೌಕೆಯಲ್ಲಿ ಸ್ಫೋಟ! ನೌಕಾಪಡೆಯ ಮೂವರು ಯೋಧರು ಹುತಾತ್ಮ..
ದೆಹಲಿ: ಭಾರತೀಯ ನೌಕಾಪಡೆಯ ದಾಳಿ ನೌಕೆ ಐಎನ್ಎಸ್ ರಣವೀರ್ನಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಮುಂಬೈನಲ್ಲಿ ನೌಕಾಪಡೆಯ ಧಕ್ಕೆಯಲ್ಲಿ ನಡೆದಿರುವ ಈ ದುರಂತದಲ್ಲಿ ಮೂವರು ಸಾವನ್ನಪ್ಪಿರುವುದನ್ನು ರಕ್ಷಣಾ ಇಲಾಖೆಯು ಪತ್ರಿಕಾ ಹೇಳಿಕೆಯಲ್ಲಿ ದೃಢಪಡಿಸಿದೆ. ಯುದ್ಧನೌಕೆಯ ಕಂಪಾರ್ಟ್ಮೆಂಟ್ ಒಂದರಲ್ಲಿ ಸ್ಫೋಟ ಸಂಭವಿಸಿದೆ. ಆದರೆ ನೌಕೆಗೆ ದೊಡ್ಡಮಟ್ಟದಲ್ಲಿ ಹಾನಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ವಿವರಿಸಿದೆ.
ನೌಕೆಯಲ್ಲಿದ್ದ ಇತರ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳಿಂದ ಈ ಸ್ಫೋಟ ಸಂಭವಿಸಿಲ್ಲ. ಸ್ಫೋಟದ ಬಗ್ಗೆ ಸಮಗ್ರ ತನಿಖೆ ನಡೆಸಲು ನೌಕಾಪಡೆಯು ವಿಚಾರಣಾ ಆಯೋಗವನ್ನು ರಚಿಸಿದೆ.
ನೌಕಾಪಡೆಯ ಪೂರ್ವ ಕಮಾಂಡ್ನಲ್ಲಿ ನವೆಂಬರ್ 2021ರಿಂದ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಐಎನ್ಎಸ್ ರಣವೀರ್ ತನ್ನ ನಿಯೋಜಿತ ಸಂಚಾರ ಮುಗಿಸಿಕೊಂಡು ಶೀಘ್ರದಲ್ಲಿಯೇ ತನ್ನ ಮೂಲನೆಲೆಗೆ ಮರಳಬೇಕಿತ್ತು. ಘಟನೆಯಲ್ಲಿ 11 ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.